ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರ ಹೋಬಳಿಯ ಹಳೇ ಬೈಯಪ್ಪನಹಳ್ಳಿ ಮತ್ತು ಬಂಡೆನಗರದಲ್ಲಿ ಆಗಿರುವ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ‘ಜನಶಕ್ತಿ ವೇದಿಕೆ’ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಎ. ರೀಗನ್ ಅವರು, ‘ಹಳೇ ಬೈಯಪ್ಪನಹಳ್ಳಿ ಮತ್ತು ಬಂಡೆನಗರದ ಸರ್ವೆ ನಂ. 61, 62, ಹಾಗೂ 63ರಲ್ಲಿರುವ ಕೆರೆ, ಕಲ್ಲು ಬಂಡೆ, ಹಾಗೂ ಕೊರಕಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳೀಯ ಬಲಾಢ್ಯರು, ಅಕ್ರಮವಾಗಿ ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಿದ್ದಾರೆ’ ಎಂದು ದೂರಿದರು.
‘ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಅಮಾಯಕರಿಗೆ ನಂಬಿಸಿರುವ ಒತ್ತುವರಿದಾರರು, ಆ ಮೂಲಕ ಹೆಚ್ಚಿನ ಬೆಲೆಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ’ ಎಂದು ಅವರು ಹೇಳಿದರು. ‘ಒತ್ತುವರಿ ಭೂಮಿ ತೆರವುಗೊಳಿಸುವಂತೆ ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.