ಹನುಮಸಾಗರ: ಇಲ್ಲಿನ ಹನುಮಸಾಗರ- ಇಲಕಲ್ ರಸ್ತೆ ದಶಕಗಳಿಂದಲೂ ದುರಸ್ತಿಯಾಗದ ಕಾರಣ ಸಂಪೂರ್ಣ ಹಾಳಾಗಿದ್ದು ವಾಹನ ಮುಂದೆ ಚಲಿಸಲು ಹರಸಾಹಸಪಡಬೇಕಾಗಿದೆ, ಅಪಘಾತಗಳು ಈ ರಸ್ತೆಯಲ್ಲಿ ಮಾಮೂಲಿಯಾಗಿವೆ.
ಸುಮಾರ 15ಕಿ.ಮೀ ವರೆಗೂ ಈ ರಸ್ತೆಯ ತುಂಬ ಕಂದಕಗಳು ನಿರ್ಮಾಣವಾಗಿದ್ದು ಇಡೀ ರಸ್ತೆ ಅಸ್ಥಿಪಂಜರದಂತೆ ಕಾಣುತ್ತದೆ.
ಹಲವಾರು ವರ್ಷಗಳಿಂದ ವಾಹನ ಚಾಲಕರು, ಸಾರ್ವಜನಿಕರು ದೂರುತ್ತಾ ಬಂದಿದ್ದರೂ ರಸ್ತೆ ದುರಸ್ಥಿ ಮಾತ್ರ ನಡೆದಿಲ್ಲ ಎಂದು ವಾಹನ ಸವಾರರಾದ ಚಂದ್ರಕಾಂತ, ರಮೇಶಪ್ಪ ದೂರುತ್ತಾರೆ. ಈ ರಸ್ತೆ ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳ ಗಡಿಭಾಗದಲ್ಲಿರುವ ಕಾರಣದಿಂದಲೇ ರಸ್ತೆಯತ್ತ ಯಾರೂ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಅಲ್ಲದೆ ಈ ರಸ್ತೆಯಲ್ಲಿ ಗ್ರಾನೈಟ್ ಕಲ್ಲುಗಳನ್ನು ಹೊತ್ತ ಲಾರಿಗಳು ನಿರಂತರ ಚಲಿಸುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ.
ಈ ಭಾಗದ ಹೆಚ್ಚಿನ ಜನರು ವ್ಯವಹಾರಕ್ಕೆ, ವಿದ್ಯಾರ್ಥಿಗಳು ಕಾಲೇಜ್ ಶಿಕ್ಷಣಕ್ಕೆ ಇಲಕಲ್, ಬಾಗಲಕೋಟೆಗಳಿಗೆ ಇದೇ ಮಾರ್ಗವಾಗಿ ಹೋಗುತ್ತಿದ್ದು, ಹದಗೆಟ್ಟ ರಸ್ತೆಯ ಕಾರಣದಿಂದೆ ಅನೇಕ ಬಸ್ಗಳು ಮಾರ್ಗ ಬದಲಿಸಿವೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಈ ರಸ್ತೆ ದುರಸ್ತಿ ಮತ್ತು ಪುನರ್ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೆ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.