ಬೆಂಗಳೂರು: ದೀರ್ಘಕಾಲದ ಕೆಮ್ಮು ಮತ್ತು ಮಧುಮೇಹ ಸಮಸ್ಯೆಗೆ ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಣಮುಖರಾಗಿದ್ದು, ಭಾನುವಾರ ದೆಹಲಿಗೆ ತೆರಳಿದರು.
‘ಕಳೆದ 10 ದಿನಗಳಿಂದ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಕೇಜ್ರಿವಾಲ್ ಅವರ ಆರೋಗ್ಯ ಗಣನೀಯವಾಗಿ ಸುಧಾರಿಸಿದೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದೆ. ಕೆಮ್ಮು ಕಡಿಮೆಯಾಗಿದೆ’ ಎಂದು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಬಬಿನಾ ನಂದಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೇಜ್ರಿವಾಲ್ ಅವರಿಗೆ ನ್ಯಾಚುರೋಪಥಿ, ಹೈಡ್ರೋಥೆರಪಿ, ಫುಲ್ ಮಡ್ ಬಾತ್, ಆಕ್ಯುಪಂಚರ್, ಕ್ಯಾಸ್ಟರ್ ಆಯಿಲ್ ಪ್ಯಾಕ್, ಆಯಿಲ್ ಥೆರಪಿ, ಪಿಸಿಯೋಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ನೀಡಲಾಗಿದೆ’ ಎಂದರು.
‘ದೆಹಲಿಗೆ ಮರಳಿದ ಬಳಿಕ ಯೋಗ, ಪ್ರಾಣಾಯಾಮ, ಧ್ಯಾನವನ್ನು ಮುಂದುವರೆಸುವಂತೆ ಕೇಜ್ರಿವಾಲ್ ಅವರಿಗೆ ಸಲಹೆ ನೀಡಲಾಗಿದೆ’ ಎಂದು ತಿಳಿಸಿದರು.
ಕೇಜ್ರಿವಾಲ್ ಅವರು ಜ.27ರಂದು ಜಿಂದಾಲ್ ಚಿಕಿತ್ಸಾಲಯದ ಒಳರೋಗಿಯಾಗಿ ದಾಖಲಾಗಿದ್ದರು. ಅವರ ಜತೆ ಪತ್ನಿ ಸುನಿತಾ ಅವರು ಬಂದಿದ್ದರು. ಸುನಿತಾ ಅವರೂ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಂಡರು.