ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆ ಸಂಬಂಧ ಲೆಫ್ಟಿನೆಂಟ್ ಗವರ್ನರ್್ ನಜೀಬ್ ಜಂಗ್ ಅವರ ಪ್ರಯತ್ನ ಸಕಾರಾತ್ಮಕವಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ನವೆಂಬರ್್ 11ವರೆಗೆ ಕಾದು ನೋಡುವಂತೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೂಚಿಸಿದೆ.
ದೆಹಲಿ ವಿಧಾನಸಭೆ ವಿಸರ್ಜಿಸುವಂತೆ ಕೋರಿ ಎಎಪಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ‘ಅಲ್ಪಮತದ ಸರ್ಕಾರ ಬಾಹ್ಯ ಬೆಂಬಲದಿಂದ ನಡೆಯುವ ಸಾಧ್ಯತೆ ಇದೆ. ಆದ ಕಾರಣ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇನ್ನಷ್ಟು ಕಾಲಾವಕಾಶ ಕೊಡಬೇಕು’ ಎಂದು ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ಎ.ಕೆ.ಸಿಕ್ರಿ, ಆರ್.ಕೆ.ಅಗರ್ವಾಲ್ ಹಾಗೂ ಅರುಣ್ ಮಿಶ್ರಾ ಅವರಿದ್ದ ಸಂವಿಧಾನ ಪೀಠ ಗುರುವಾರ ಹೇಳಿತು.
‘ಸರ್ಕಾರ ರಚನೆ ವಿಷಯವಾಗಿ ಲೆ.ಗವರ್ನರ್್ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ ಎನ್ನುವುದು ಮಾಧ್ಯಮ ವರದಿಗಳಿಂದ ಗೊತ್ತಾಗುತ್ತದೆ. ಅವರಿಗೆ ಇನ್ನಷ್ಟು ಕಾಲಾವಕಾಶ ಕೊಡೋಣ’ ಎಂದ ಪೀಠ ವಿಚಾರಣೆಯನ್ನು ನವೆಂಬರ್್ 11ರವರೆಗೆ ಮುಂದೂಡಿತು. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಸ್ಥಾನಗಳನ್ನು ನೋಡಿದರೆ ಸರ್ಕಾರ ರಚನೆ ಅಸಾಧ್ಯ ಎನಿಸುತ್ತದೆ ಎಂದು ಎಎಪಿ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು. ಆಗ ಪೀಠವು ‘ನಾವು ಯಾವಾಗಲೂ ಆಶಾವಾದಿಗಳಾಗಿರಬೇಕು’ ಎಂದಿತು.
ದೆಹಲಿಯಲ್ಲಿ ಸರ್ಕಾರ ರಚನೆ ಸಾಧ್ಯತೆ ಅನ್ವೇಷಿಸುವಂತೆ ನಜೀಬ್ ಜಂಗ್ ಅವರು ರಾಜಕೀಯ ಪಕ್ಷಗಳಿಗೆ ಬುಧವಾರ ಕರೆ ನೀಡಿದ್ದರು.
ದೆಹಲಿಯಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.