ಬೆಂಗಳೂರು: ‘ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ಮಹತ್ವದ್ದು’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶ್ಲಾಘಿಸಿದರು.
ಕರ್ನಾಟಕ ಕೈಗಾರಿಕೆ ಮತ್ತ ವಾಣಿಜ್ಯ ಮಹಾಸಂಸಂಸ್ಥೆ (ಎಫ್ಕೆಸಿಸಿಐ)ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
‘ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದಲ್ಲಿ ಶೇಕಡಾ 6ರಷ್ಟು ಕರ್ನಾಟಕದ ಪಾಲು ಇದೆ. ಒಟ್ಟು ಬಂಡವಾಳದಲ್ಲಿ ಶೇಕಡಾ 7ರಷ್ಟು ಮತ್ತು ರಫ್ತಿನಲ್ಲಿ ಶೇಕಡಾ 13ರಷ್ಟು ಕರ್ನಾಟಕದ ಕೊಡುಗೆ ಇದೆ’ ಎಂದರು.
‘ತಾಂತ್ರಿಕತೆ ಆಧಾರಿತ ಅಭಿವೃದ್ಧಿ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬಿಎಚ್ಇಎಲ್, ಎಚ್ಎಎಲ್, ಬಿಇಎಂಎಲ್, ಬಿಇಎಲ್ ಮುಂತಾದ ಪ್ರಮುಖ ಉದ್ಯಮಗಳು ದೇಶ ಸ್ವಾತಂತ್ರ್ಯ ಪಡೆದ ಕೂಡಲೇ ಇಲ್ಲಿ ಆರಂಭಗೊಂಡಿವೆ. ಇದರ ಯಶಸ್ಸು ಕರ್ನಾಟಕದ ಇದುವರೆಗಿನ ಸರ್ಕಾರಗಳಿಗೆ ಸಲ್ಲುತ್ತದೆ. ಇಲ್ಲಿನ ಕೈಗಾರಿಕಾ ನೀತಿಗಳು ಉದ್ಯಮಗಳಿಗೆ ಪೂರಕವಾಗಿವೆ’ ಎಂದು ಪ್ರಶಂಸಿಸಿದರು.
ಬಡತನ ನಿರ್ಮೂಲನೆ: ‘ಬಡತನ ನಿರ್ಮೂಲನೆಗೆ ಉದ್ಯೋಗ ಸೃಷ್ಟಿಯೊಂದೇ ಮಾರ್ಗವಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ ಎರಡೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ನಿಟ್ಟಿನಲ್ಲಿ ಉದ್ಯಮಗಳು ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಬೇಕು’ ಎಂದರು.
‘2005ರಲ್ಲಿ ಶೇಕಡಾ 372 ರಷ್ಟಿದ್ದ ಬಡತನ 2011–12ರಲ್ಲಿ ಶೇಕಡಾ 21.9ಕ್ಕೆ ಇಳಿಸಿದೆ. 2009–10ರಿಂದ 2011–12 ರ ಅವಧಿಯಲ್ಲಿ 85 ದಶಲಕ್ಷ ಜನರನ್ನು ಬಡತನದಿಂದ ಹೊರ ತರಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೆಚ್ಚಾದಂತೆ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ಕೌಶಲ್ಯಾಧಾರಿತ ಮಾನವ ಸಂಪನ್ಮೂಲವೂ ಹೆಚ್ಚುತ್ತದೆ. ಇವೆಲ್ಲವೂ ದುಡಿಯುವ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗುತ್ತದೆ’ ಎಂದರು.
ಸಿಮೆಂಟ್, ಸ್ಟೀಲ್, ಆಟೋಮೊಬೈಲ್ಸ್, ಏರೋಸ್ಪೇಸ್ ವಲಯದ 1ಸಾವಿರಕ್ಕೂ ಹೆಚ್ಚು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಕರ್ನಾಟಕದಲ್ಲಿವೆ. ಐಟಿ ವಲಯದಲ್ಲಿ ಕರ್ನಾಟಕ ದೈತ್ಯಶಕ್ತಿಯಾಗಿದ್ದು, 1200 ಕಂಪನಿಗಳು ಇವೆ. 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾರಣ 2009–11ರವರೆಗೆ ದೇಶದ ಆಂತರಿಕ ಉತ್ಪಾದನೆ ಪ್ರಮಾಣ ಕುಸಿದಿತ್ತಾದರೂ ಆದಷ್ಟು ಬೇಗ ಚೇತರಿಸಿಕೊಳ್ಳಲು ಕರ್ನಾಟಕವೂ ಕಾರಣ ಎಂದರು.