ಚಿಕ್ಕೋಡಿ: ಭೀಕರ ಬರಗಾಲದಿಂದಾಗಿ ಕುಡಿಯುವ ನೀರಿನ ತೀವೃ ಸಮಸ್ಯೆ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಯ ಆಯ್ದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹10 ಲಕ್ಷ ಹಣವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ನೀಡಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕ ಶೀನಪ್ಪ ಹೇಳಿದರು.
ಮಂಗಳವಾರ ತಾಲ್ಲೂಕಿನ ಬರಪೀಡಿತ ಗ್ರಾಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾಗುವ ಅನುದಾನದಡಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಬೆಳಕೂಡ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಭೀಕರ ಬರಗಾಲ ಎದುರಾಗಿ ಜನರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿರುವುದನ್ನು ಮನಗಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬೆಳಗಾವಿ ಜಿಲ್ಲೆಗೆ ಹಣ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂ ಕಿನ 4 ಹಳ್ಳಿಗಳಿಗೆ ಮೊದಲ ಹಂತವಾಗಿ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
5ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಮೂಲಕ ವಾರದಲ್ಲಿ ಪ್ರತಿ ಹಳ್ಳಿಗೆ 3 ಬಾರಿ ನೀರು ಪೂರೈಸಲಾ ಗುವುದು ಎಂದು ಶೀನಪ್ಪ ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಆ ಮೂಲಕ ಆರ್ಥಿಕ ಅಭಿವೃದ್ಧಿ, ಧಾರ್ಮಿಕ ಜಾಗೃತಿಗೆ ಒತ್ತು ನೀಡಿರುತ್ತಾರೆ ಹಾಗೂ ಇಂದಿನ ಬರಗಾಲ ಪರಿಸ್ಥಿತಿಯಲ್ಲಿ ತೀವೃ ನೀರಿನ ಸಮಸ್ಯೆಯಲ್ಲಿಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಕಾರ್ಯ ಪ್ರಶಂಸಾರ್ಹವಾಗಿದೆ. ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ಕಾಮಗೌಡ, ಯೋಜನಾಧಿಕಾರಿ ಡಿ. ಲೀಲಾಮೂರ್ತಿ , ಪಿಡಿಓ ಹಿಟ್ನಾಳೆ ಇದ್ದರು.
ಅಥಣಿ ವರದಿ
ಭೀಕರ ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನ ಅನಂತಪೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಶೀನಪ್ಪ ಎಂ. ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದರು. ತಾ.ಪಂ ಮಾಜಿ ಸದಸ್ಯ ಮಹಾಂತೇಶ ಸಾಲಿಮಠ, ಮುಖಂಡರಾದ ಬವಲಿಂಗ ತೇರದಾಳ, ಕಮಲಾ ಕಾಂಬಳೆ, ಸ್ಥಳೀಯ ಯೋಜನಾ ಧಿಕಾರಿ ವಿಠ್ಠಲ ಆಲಿಯಾನ್, ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ ಕುಮಾರ, ಜಿ.ವಿ. ಕೃಷ್ಣಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.