ಮೈಸೂರು: ದೇಶದಲ್ಲಿ ಈಚೆಗೆ ‘ಘರ್ ವಾಪಸಿ’ ಹೆಸರಲ್ಲಿ ಧರ್ಮಾಂತರಗೊಳಿಸುವುದು ನಡೆಯುತ್ತಿದೆ. ಹಾಗೆ ವಾಪಸು ಬಂದವರನ್ನು ಯಾವ ಜಾತಿಗೆ ಸೇರಿಸುತ್ತೀರಿ? ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಾಂತರಗೊಂಡವರು ಕೆಳಜಾತಿಗೆ ಸೇರಲು ಇಷ್ಟಪಡುವುದಿಲ್ಲ. ಮೇಲ್ಜಾತಿಯವರು ಸೇರಿಸಿಕೊಳ್ಳುವುದಿಲ್ಲ. ಹೀಗಿದ್ದಾಗ ಯಾವ ಜಾತಿಗೆ ಸೇರುತ್ತಾರೆಂಬುದು ಮುಖ್ಯವಾಗುತ್ತದೆ.
ಈ ದೇಶದಲ್ಲಿ 2,750 ಜಾತಿಗಳಿವೆ. ಜತೆಗೆ, ಸಾವಿರಾರು ಉಪಜಾತಿಗಳಿವೆ. ಆದರೂ, ಇಷ್ಟವಾದ ಧರ್ಮವನ್ನು ಆಯ್ದುಕೊಳ್ಳಲು ಸಂವಿಧಾನವು ಹಕ್ಕು ಕೊಟ್ಟಿದೆ ನಿಜ. ಆದರೆ, ದುಡ್ಡು, ಜಮೀನು, ಬೆಳ್ಳಿ, ಬಂಗಾರದ ಆಮಿಷವೊಡ್ಡಿ ಧರ್ಮಾಂತರಗೊಳಿಸುವ ಘಟನೆಗಳು ಹೆಚ್ಚುತ್ತಿವೆ ಎಂದು ಆತಂಕಪಟ್ಟರು.
ಬಸವಣ್ಣನ ಕಾಲದಲ್ಲಿ ಆಮಿಷ ಒಡ್ಡಿ ಧರ್ಮಾಂತರಗೊಳಿಸುತ್ತಿರಲಿಲ್ಲ. ಸಮಾನತೆಗಾಗಿ ಕೆಳವರ್ಗದವರನ್ನು ಮೇಲಕ್ಕೆತ್ತಲಾಗು-ತ್ತಿತ್ತು. ಈ ಮೂಲಕ ಅಸ್ಪೃಶ್ಯತೆ ಹೋಗಲಾಡಿಸುವ ಯತ್ನ ನಡೆಯಿತು. ಈಗ ಬಸವಣ್ಣನ ಧರ್ಮ ಸೇರುವುದೆಂದರೆ ಲಿಂಗ ಕಟ್ಟಿಕೊಂಡರೆ ಲಿಂಗಾಯತರಾದಂತೆ. ಇದಕ್ಕಾಗಿ ಬಸವಣ್ಣ ಪ್ರತಿಪಾದಿಸಿದ ಸಮಾನತೆಯ ತತ್ವವನ್ನು ಪ್ರಚಾರಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಸಮಾರಂಭಕ್ಕೂ ಮೊದಲು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ಅನಗತ್ಯ. ಆದರೂ, ಈ ಕುರಿತು ಯಾರಿಗೆ ಆಸಕ್ತಿ ಅವರನ್ನೇ ಕೇಳಿ ಎಂದರು. ವಿಧಾನಸಭೆಗೆ ಚುನಾವಣೆ ನಡೆದ ನಂತರ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ನಡೆಯಬೇಕಿತ್ತು ಮತ್ತು ಆಯ್ಕೆ ಮಾಡಬಹುದಿತ್ತು.
ಈಗ ಚರ್ಚಿಸುವ ಮೂಲಕ ದಲಿತರನ್ನು ಮತ್ತು ಹಿಂದುಳಿದವರನ್ನು ಬೇರ್ಪಡಿಸುವ ತಂತ್ರ ನಡೆಯುತ್ತಿದೆ ಎಂದು ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ಅರ್ಕಾವತಿ ಡಿನೋಟಿಫಿಕೇಷನ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಉತ್ತರ ಕೊಟ್ಟಿದ್ದಾರೆ. ಜತೆಗೆ, ಅವರ ಬಳಿ ಸರಿಯಾದ ದಾಖಲೆಗಳಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.