ಜೈಪುರ (ಐಎಎನ್ಎಸ್): `ಸಾಮಾಜಿಕ ಚಿಂತಕ ಆಶಿಷ್ ನಂದಿ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರ ಕುರಿತು ಒಳ್ಳೆಯ ಉದ್ದೇಶದಿಂದ ಕೆಟ್ಟ ಹೇಳಿಕೆ ನೀಡಿದ್ದಾರೆ' ಎಂದು ದಲಿತ ಪರ ಹೋರಾಟಗಾರ ಕಾಂಚಾ ಐಲಯ್ಯ ಅಭಿಪ್ರಾಯಪಟ್ಟಿದ್ದಾರೆ.
ಜೈಪುರ ಸಾಹಿತ್ಯ ಸಮ್ಮೇಳನದ ಆಶಿಷ್ ನಂದಿಯವರ ಗೋಷ್ಠಿಯಲ್ಲಿ ಪ್ರೇಕ್ಷಕರಾಗಿ ಪಾಲ್ಗೊಂಡಿದ್ದ ಅವರು, `ಆಶಿಷ್ ಅವರನ್ನು ಬಹಳ ಕಾಲದಿಂದ ಬಲ್ಲೆ. ಅವರ ಚಿಂತನೆಗಳು ಎಂದೂ ಮೀಸಲಾತಿ ವಿರುದ್ಧವಿಲ್ಲ. ಈ ವಿವಾದಾತ್ಮಕ ವಿಚಾರವನ್ನು ಇಲ್ಲಿಗೇ ಕೊನೆಗೊಳಿಸುವುದು ಒಳ್ಳೆಯದು' ಎಂದು ಹೇಳಿದರು.
ನಂದಿಯವರ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಜಸ್ತಾನ ಪೊಲೀಸರು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಅನ್ವಯ ಎಫ್ಐಆರ್ ದಾಖಲಿಸಿದ ಮಾರನೇ ದಿನ ಕಾಂಚಾಲ ಐಲಯ್ಯ ಈ ಹೇಳಿಕೆ ನೀಡಿದ್ದಾರೆ.
ಆಶೀಶ್ ನಂದಿಯವರು ಮಾತನಾಡಿದ `ರಿಪಬ್ಲಿಕ್ ಆಫ್ ಐಡಿಯಾಸ್' ಎಂಬ ಗೋಷ್ಠಿಯಲ್ಲಿ ತರುಣ್ ತೇಜ್ಪಾಲ್, ರಿಚರ್ಡ್ ಸೊರಾಬ್ಜಿ ಮತ್ತು ಊರ್ವಶಿ ಬುತಾಲಿಯಾ ಕೂಡ ಹಾಜರಿದ್ದರು.