ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.ಕೃಷ್ಣಪ್ಪಗೆ ಭಾವಪೂರ್ಣ ನಮನ

ವ್ಯಕ್ತಿತ್ವ ರೂಪಿಸಿದ ಗುರು: ನಿರ್ದೇಶಕ ಟಿ.ಎನ್‌. ಸೀತಾರಾಂ ಬಣ್ಣನೆ
Last Updated 20 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‌‘ನನ್ನ ವ್ಯಕ್ತಿತ್ವವನ್ನು ರೂಪಿಸಿದವರು ಅವರು. ಮನುಷ್ಯ ಪ್ರೀತಿ ಹೇಗಿರಬೇಕು ಎಂದು  ತೋರಿಸಿದವರು. ಅಂತಃಕರಣವನ್ನು ತಟ್ಟಿದವರು. ಭರವಸೆಯ ಬೆಳಕಾಗಿ ಕಾಣಿಸಿದವರೂ ಅವರೇ’.

ಇದು, ಇತ್ತೀಚೆಗೆ ನಿಧನ ಹೊಂದಿದ ಆರೆಸ್ಸೆಸ್‌ನ ಹಿರಿಯ ಪ್ರಚಾರಕ ನ.ಕೃಷ್ಣಪ್ಪ ಅವರನ್ನು  ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರು ಭಾವುಕರಾಗಿ ಸ್ಮರಿಸಿದ ಪರಿ.

ಕುವೆಂಪು ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಅವರಿಗೆ ನುಡಿ ನಮನ ಸಲ್ಲಿಸಿದ ಅವರು, ‘ನನಗೆ ಜೀವನದಲ್ಲಿ ನಾಲ್ವರು ಗುರುಗಳು. ನನ್ನ ತಂದೆ,  ಪಿ. ಲಂಕೇಶ್‌, ಪುಟ್ಟಣ್ಣ ಕಣಗಾಲ್‌ ಮತ್ತು ನ. ಕೃಷ್ಣಪ್ಪನವರು. ಬಾಲ್ಯದಲ್ಲಿಯೇ ಮಾರ್ಗದರ್ಶನ ನೀಡಿ ವ್ಯಕ್ತಿತ್ವ ರೂಪಿಸಿದ  ಕೃಷ್ಣಪ್ಪನವರು ಮೊನ್ನೆ ತೀರಿಕೊಂಡರು. ಈಗ ನಾಲ್ಕೂ ಜನ ಗುರುಗಳು ನನ್ನೆದುರು ಇಲ್ಲ. ಗುರುಗಳಿಲ್ಲದ ತಬ್ಬಲಿ ಭಾವ ನನ್ನಲ್ಲಿ ಆವರಿಸಿದೆ’ ಎಂದು ಬೇಸರಿಸಿದರು.

ಬಾಲ್ಯದಲ್ಲಿ ಕೃಷ್ಣಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಸೀತಾರಾಂ, ‘ನನ್ನಲ್ಲಿ ಒಂದು ಸ್ವಲ್ಪವಾದರೂ ಮನುಷತ್ವ ಇದ್ದರೆ ಅದಕ್ಕೆ ಕೃಷ್ಣಪ್ಪನವರು ಕಾರಣ. ನನಗೆ ಮೊದಲ ಬಾರಿಗೆ ಜಾತ್ಯತೀತ ಪಾಠವನ್ನು ಹೇಳಿಕೊಟ್ಟ ಗುರು. ಬಡತನದ ಘೋರವನ್ನು ನಗುನಗುತ್ತಲೇ ತಿಳಿಸಿದವರು ’ ಎಂದು ಹೇಳಿದರು.

‘ಅವರು ನನ್ನನ್ನು ಸ್ವಯಂ ಸೇವಕನಾಗಿ ಮಾಡಲಿಲ್ಲ. ಕಾರ್ಯಕರ್ತನೂ ನಾನಾಗಲಿಲ್ಲ.  ಅವರ ಸಿದ್ಧಾಂತವನ್ನು ಎಂದಿಗೂ ಹೇರಲಿಲ್ಲ.  ನಾನು ಸಮಾಜವಾದದತ್ತ ವಾಲಿದಾಗ, ನಿನ್ನ ಸಿದ್ಧಾಂತ ನಿನಗೆ, ನನ್ನದು ನನಗೆ ಎಂದು    ಹೇಳುತ್ತಿದ್ದರು’ ಎಂದು ನೆನೆದರು.

ಜೀವನವೇ ಯಜ್ಞ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಅವರ ಜೀವನವೇ ಯಜ್ಞದಂತಿತ್ತು. ಅವರೊಬ್ಬ ಸ್ಪರ್ಶಮಣಿ’ ಎಂದರು.

ಕೃಷ್ಣಪ್ಪನವರಿಗೆ 20 ವರ್ಷ  ಚಿಕಿತ್ಸೆ ನೀಡಿದ್ದ ಡಾ. ಕೆ.ಎನ್‌. ಶ್ರೀಧರ್‌ ಮಾತನಾಡಿ, ‘ಮನಸ್ಸನ್ನು ನಿಯಂತ್ರಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಸಾವನ್ನು ಕೂಡ ನಿಯಂತ್ರಿಸಬಲ್ಲೆ ಎಂದು ಅವರು ಹೇಳುತ್ತಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ’ ಎಂದು ದುಃಖಿಸಿದರು.
ಕೃಷ್ಣಪ್ಪ ಧ್ಯೇಯಜೀವಿ ಎಂದು ಆರೆಸ್ಸೆಸ್‌ ಮುಖಂಡ ದತ್ತಾತ್ರೇಯ ಹೊಸಬಾಳೆ ಬಣ್ಣಿಸಿದರು.

ಆದರ್ಶಜೀವಿ: ಭಾಗವತ್‌
ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಮಾತನಾಡಿ, ‘ದೇಹವನ್ನೂ ದಾನ ಮಾಡಿದ ದೊಡ್ಡ ಮನುಷ್ಯ. ತನ್ನ ಸಂಸ್ಕಾರ, ಶ್ರಾದ್ಧ ಸೇರಿದಂತೆ ಯಾವುದೇ ವಿಧಿಗಳನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ. ಅವರ ವ್ಯಕ್ತಿತ್ವ, ಗುಣಗಳಲ್ಲಿ ಯಾವುದಾದರೂ ಒಂದನ್ನು ಅನುಕರಣೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ. ಜೀವನದಲ್ಲಿ ಅವರ ತತ್ವಗಳನ್ನು ಅನುಸರಿಸುವ ಸಂಕಲ್ಪ ಮಾಡೋಣ’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT