ನಾಡಗೀತೆ ಪರಿಷ್ಕರಣೆ ವಿವಾದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ (ಪ್ರ.ವಾ. ಅಂತರಾಳ, ನ. ೨೨-). ಡಾ.ಚನ್ನವೀರ ಕಣವಿಯವರು ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಕುರಿತಂತೆ ‘ಕುವೆಂಪು ಇದನ್ನು ನಾಡಗೀತೆಗೆಂದು ಬರೆದಿದ್ದಲ್ಲ, ‘ಕೊಳಲು’ ಸಂಕಲನದ ಗೀತೆ ಇದು’ ಎಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಭಿಪ್ರಾಯದಲ್ಲಿ ‘ಕುವೆಂಪು ಅವರು ಈ ಗೀತೆಯನ್ನು ರಚಿಸಿದಾಗ ಇದು ನಾಡಗೀತೆಯಾಗುತ್ತದೆ ಎಂದು ಭಾವಿಸಿರಲಿಲ್ಲ’. ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರು ‘ಕುವೆಂಪು ಬಂದು ತಮ್ಮ ಹಾಡನ್ನು ನಾಡಗೀತೆ ಮಾಡಿ ಎಂದು ಯಾರಲ್ಲೂ ವಿನಂತಿಸಿರಲಿಲ್ಲ’ ಎಂದಿದ್ದಾರೆ. ಈ ಹಿರಿಯರು ಕುವೆಂಪು ಅವರು ತಮ್ಮ ‘ನೆನಪಿನ ದೋಣಿ’ಯಲ್ಲಿ (ಪುಟ ೫೪೫) ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ:
‘ಇದೊಂದು ಸ್ವಾರಸ್ಯದ ವಿಷಯ. ೧೯೨೪-೨೫ರ ನನ್ನೊಂದು ಹಸ್ತಪ್ರತಿಯಲ್ಲಿ ‘ಕರ್ನಾಟಕ ರಾಷ್ಟ್ರಗೀತೆ’ ಎಂಬ ಕವನವಿದೆ. ಅದು ನನ್ನ ‘ಜಯಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೋ, ಪ್ರಪ್ರಪಿತಾಮಹನೋ ಆಗಿರಬೇಕು. ಠಾಕೂರರ ಜನಗಣಮನದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣ ಸ್ಥಿತಿಯಂತಿದೆ ಅದು. ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯಾಗಿ ಸ್ವೀಕರಿಸಿದಾಗ ಮೂರು ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು. ೪೭ ವರ್ಷಗಳ ಅನಂತರ ೧೯೭೨ನೇ ಜುಲೈ ತಿಂಗಳಿನಲ್ಲಿ ಇಂದು (ನಾನೀಗ ಇದನ್ನು ಬರೆಯುತ್ತಿರುವುದು ೨೭-೭-೧೯೭೨) ನಾಡಿಗೆ ಕರ್ಣಾಟಕ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿದ ನಾಡಗೀತೆಯನ್ನು ಸರಕಾರವೂ ಒಪ್ಪುತ್ತದೆಂದು ಹಾರೈಸುತ್ತೇನೆ’.
ಕುವೆಂಪು ಅವರು ಟ್ಯಾಗೋರರ ‘ಜನಗಣಮನ’ ‘ರಾಷ್ಟ್ರಗೀತೆ’ಯಾದ ಹಾಗೆ ತಮ್ಮ ಗೀತೆಯೂ ಕರ್ನಾಟಕದ ‘ನಾಡಗೀತೆ’ಯಾಗಬೇಕೆಂಬ ಸದಾಶಯದಿಂದಲೇ ಬರೆದಿದ್ದಾರೆ. ‘ನಾಡಗೀತೆ’ಯೊಂದನ್ನು ಹಾಡಲು ಬೇಕಾದ ಸಮಯ, ರೀತಿ– ರಿವಾಜುಗಳ ಕಲ್ಪನೆ ಅವರಿಗಿತ್ತು. ಹಾಗಾಗಿ ಇದೊಂದು ಉದ್ದೇಶಪೂರ್ವಕ ರಚನೆಯಾಗಿದೆ. ಸರ್ಕಾರ ಇದನ್ನು ‘ನಾಡಗೀತೆ’ ಯನ್ನಾಗಿ ಸ್ವೀಕರಿಸಬೇಕೆಂಬ ಆಳದ ತುಡಿತವೂ ಅವರಿಗಿತ್ತು ಎನ್ನುವುದು ಮೇಲಿನ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ. ಹಿರಿಯರು ತಮ್ಮ ನಿಲುವನ್ನು ಕುರಿತು ಮರುಚಿಂತನೆ ಮಾಡಬೇಕೆಂದು ವಿನಂತಿಸುವೆ.
ಡಾ.ಎಂ. ಚಿದಾನಂದ ಮೂರ್ತಿಯವರು ಕುವೆಂಪು ಅವರ ನಾಡಗೀತೆಯನ್ನು ಸಾರಾಂಶೀಕರಿಸುತ್ತ ‘ಕರ್ನಾಟಕದ ಹೆಮ್ಮೆಯ ವಿದ್ಯಾರಣ್ಯ, ಬಸವಣ್ಣ, ಮಧ್ವರಂಥ ಶ್ರೇಷ್ಠ ಸಾಧಕರಿಗೆ, ಚಿಂತಕರಿಗೆ, ಪಂಪ, ರನ್ನ, ಪೊನ್ನ, ಜನ್ನ, ಲಕ್ಷ್ಮೀಶರಂತಹ ಶ್ರೇಷ್ಠ ಕವಿಗಳಿಗೆ ಕರ್ನಾಟಕ ಮಾತೆ ಜನ್ಮ ನೀಡಿದ್ದಾಳೆ’ ಎಂದಿದ್ದಾರೆ. ಇದು ಕುವೆಂಪು ಅವರ ನಾಡಗೀತೆಯಲ್ಲಿ ‘ಮಧ್ವ’ರ ಹೆಸರು ಇದೆ ಎಂಬ ತಪ್ಪು ಕಲ್ಪನೆಯನ್ನು ಮೂಡಿಸುತ್ತದೆ. ಈ ಕುರಿತು ಈಗಾಗಲೇ ನಡೆದ ವಾಗ್ವಾದಗಳನ್ನು ಮರೆಮಾಚುತ್ತದೆ. ಚಿದಾನಂದಮೂರ್ತಿಅವರು ತಮ್ಮ ಲೇಖನದ ಆರಂಭದಲ್ಲಿಯೇ ‘ರಾಷ್ಟ್ರಕವಿ ಕುವೆಂಪು ೧೯೩೦ರಲ್ಲಿ ರಚಿಸಿದ ‘ಜೈ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಪಡೆಯಿತು’ ಎಂದು ಉಲ್ಲೇಖಿಸಿರುವುದರಿಂದ ಮೇಲೆ ಸೂಚಿಸಿದ ತಪ್ಪು ಅಭಿಪ್ರಾಯ ಮೂಡುತ್ತದೆ. ಇಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸ್ಪಷ್ಟೀಕರಣವನ್ನು ಗಮನಿಸಬೇಕು.
‘ನಾಡಗೀತೆಯಲ್ಲಿ ಮಧ್ವರ ಹೆಸರು ಸೇರಿಸಬೇಕೆಂದು ಕುವೆಂಪು ಅವರ ಹತ್ತಿರ ಬಂದವರೇನೂ ಬ್ರಾಹ್ಮಣರಾಗಲೀ, ಮಧ್ವ ಮತಾನುಯಾಯಿಗಳಾಗಲೀ ಅಲ್ಲ. ಅವರ ಚಿತಾವಣೆಯಿಂದ ಪ್ರಭಾವಿತಗೊಂಡ ಹಲವು ಮತಮೂಢ ಶೂದ್ರರೇ ಮುಂದಾಗಿದ್ದು. ತಾವು ಯಾರ ಪರವಾಗಿ ದನಿ ಎತ್ತಿದರೋ ಅವರೇ ಈ ರೀತಿ ವರ್ತಿಸುವುದನ್ನು ಕಂಡು ಕುವೆಂಪು ಏನಾದರೂ ಮಾಡಿಕೊಳ್ಳಿ ಎಂದು ಹೇಳಿಕಳಿಸಿದರೇ ಹೊರತು ಅದರ ತಿದ್ದುಪಡಿಗಳನ್ನು ತಾವೇ ಮಾಡಿಕೊಟ್ಟರೆಂಬುದು ಹಾಗೂ ಅದಕ್ಕೆ ಅವರ ಸಮ್ಮತಿ ಇತ್ತೆಂಬುದೂ ಶುದ್ಧ ಸುಳ್ಳು’ (ಕುವೆಂಪು: ಶತಮಾನದ ಶಿಖರ, ಪುಟ ೫).
ಕರ್ನಾಟಕ ಸರ್ಕಾರವು 2004ರ ಫೆ. 23ರಂದು ಅಧಿಕೃತವಾಗಿ ಘೋಷಿಸಿದ ಈ ನಾಡಗೀತೆಯನ್ನು, ಹಿರಿಯರಿಗೆ ನಿಲ್ಲಲು ತೊಂದರೆ ಹಾಗೂ ಬೇರೆ ಬೇರೆ ಧಾಟಿ, ಲಯಗಳಲ್ಲಿ ಹಾಡುತ್ತಿರುವ ಕಾರಣಗಳಿಂದ ಮೊಟಕುಗೊಳಿಸಿ ಪರಿಷ್ಕರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿಯಮಿಸಿದ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಡಾ.ಚನ್ನವೀರ ಕಣವಿಯವರು. ಅವರು ಕುವೆಂಪು ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸಾಲನ್ನು ತೆಗೆದಿದ್ದಾರೆಂದು ಸುದ್ದಿ ಹಬ್ಬಿಸಿರುವ ಹಾಗೂ ಆ ಸುದ್ದಿಯನ್ನೇ ನಂಬಿ ಕೆಲವರು ವಿರೋಧಿ ಹೇಳಿಕೆ ನೀಡುತ್ತಿರುವುದರ ಬಗ್ಗೆ ನೈತಿಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಆಧಾರ ರಹಿತವಾಗಿ ಹೇಳಿಕೆ ನೀಡುವುದು ತಪ್ಪು.
ರವೀಂದ್ರನಾಥ ಟ್ಯಾಗೋರ್ ಅವರಿಗೆ ತಮ್ಮ ಗೀತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಉದ್ದೇಶವಿರಲಿಕ್ಕಿಲ್ಲ. ಹೀಗಾಗಿ ಅವರ ಐದು ಭಾಗಗಳ ಸುದೀರ್ಘ ಪದ್ಯದ ಒಂದು ಭಾಗವನ್ನು ಎತ್ತಿಕೊಂಡು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಲಾಗಿದೆ.
ಒಂದು ವೇಳೆ ಮೊದಲ ಭಾಗದಲ್ಲಿ ಇನ್ನೂ ಕೆಲವು ಸಾಲುಗಳಿದ್ದರೂ ಅದನ್ನು ಒಪ್ಪಿಕೊಳ್ಳಲಾಗುತ್ತಿತ್ತು. ಆದರೆ ಕುವೆಂಪು ಅವರು ಟ್ಯಾಗೋರರ ಪರಿಷ್ಕೃತ ರಾಷ್ಟ್ರಗೀತೆಯನ್ನು ಅನುಲಕ್ಷಿಸಿ ಸಾಕಷ್ಟು ಯೋಚಿಸಿ ‘ನಾಡಗೀತೆ’ಗಾಗಿಯೇ ಈ ಗೀತೆಯನ್ನು ಬರೆದಿರುವುದರಿಂದ ಅದನ್ನು ಮತ್ತೆಮತ್ತೆ ಮೊಟಕುಗೊಳಿಸುವ ಅಥವಾ ಬೇರೇನನ್ನೋ ಸೇರಿಸುವ ಪ್ರಯತ್ನ ಕುವೆಂಪು ಅವರ ವ್ಯಕ್ತಿತ್ವಕ್ಕೆ ಗೌರವ ತರುವಂಥದ್ದಲ್ಲ.
-ಡಾ.ಎಂ.ಡಿ. ಒಕ್ಕುಂದ, ಧಾರವಾಡ
******
ಕತ್ತರಿ ಹಾಕಿದರೆ ಕವಿ ಭಾವಕ್ಕೆ ಪೆಟ್ಟು
ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪರಿಷ್ಕರಣೆ ಸಂಬಂಧದ ‘ಅಂತರಾಳ’ ಪುಟದ ಲೇಖನಗಳು ಚಿಂತನೆಗೆ ಹಚ್ಚುವಂತಿವೆ. ಬಹುತೇಕ ಲೇಖಕರು ಸದ್ಯದ ಗೀತೆಯ ಸ್ವರೂಪದ ಬದಲಾವಣೆ ಬೇಡ, ಇದರಿಂದ ಗೀತೆಯ ಭಾವಕ್ಕೆ ಪೆಟ್ಟು ಬಿದ್ದಂತಾಗುತ್ತದೆ ಎಂದಿದ್ದಾರೆ.
ಕುವೆಂಪು ಅವರ ಈ ಗೀತೆಯನ್ನು 2004ರಲ್ಲಿ ನಾಡಗೀತೆಯಾಗಿ ಪ್ರಕಟಿಸುವ ಮುಂಚೆಯೇ ಗೀತೆಯ ಉದ್ದ, ಅದನ್ನು ಹಾಡಲು ಬೇಕಾಗುವ ವೇಳೆ ಬಗ್ಗೆ ಯೋಚಿಸಬೇಕಿತ್ತು. ಆದರೆ ಈಗ ಗೀತೆ ಪ್ರತಿಯೊಬ್ಬ ಕನ್ನಡಿಗನ ನಾಲಗೆ ಮೇಲೆ ನಲಿದಾಡುತ್ತಿರುವಾಗ ಇದರ ರೂಪ ಬದಲಿಸಲು ಹೊರಟಿರುವುದು ಸರಿಯಲ್ಲ. ನಾಡಗೀತೆ ಪರಿಷ್ಕರಣ ಸಮಿತಿ ಅಧ್ಯಕ್ಷ ಚನ್ನವೀರ ಕಣವಿ ಅವರು, ‘ನಾಡಗೀತೆ ಸುದೀರ್ಘವಾಗಿರುವುದರಿಂದ ಬಹಳಷ್ಟು ಜನರಿಗೆ ಅಷ್ಟು ಸಮಯ ನಿಂತುಕೊಳ್ಳಲು ಕಷ್ಟವಾಗುತ್ತದೆ ಎಂಬುದು ಪರಿಷ್ಕರಣೆಗೆ ಮುಂದಾಗಿರುವುದರ ಹಿಂದಿನ ಮುಖ್ಯ ಕಾರಣ’ ಎಂದಿರುವುದು ಸರಿಯಲ್ಲ.
ನಾಡಗೀತೆಯನ್ನು ನಿಂತೇ ಹಾಡಬೇಕೆಂಬ ನಿಯಮ ಸಡಿಲಿಸಲಿ. ನಿಂತು ಹಾಡುವುದು ಕುಳಿತು ಹಾಡುವುದು ಮುಖ್ಯವಲ್ಲ. ಆದರೆ ಗೀತೆ ಹಾಡುವಾಗ ಅದರ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ರಾಷ್ಟ್ರಗೀತೆ ಒಂದನ್ನು ನಿಂತು ಹಾಡಿದರೆ ಸಾಕು. ಎಂ. ಚಿದಾನಂದಮೂರ್ತಿ ಅವರು ‘ಗೀತೆ ಸಂಕ್ಷಿಪ್ತವಾಗಲಿ; ನಾಡಪ್ರೇಮ ಉಕ್ಕಲಿ’ ಎಂದಿದ್ದಾರೆ. ಗೀತೆ ಸಂಕ್ಷಿಪ್ತವಾದ ತಕ್ಷಣ ನಾಡಪ್ರೇಮ ಉಕ್ಕುವುದಿಲ್ಲ. ಈಗಿನ ನಾಡಗೀತೆ ಅದ್ಭುತವಾದ ಗೀತೆ. ಈ ಗೀತೆಯ ಒಂದು ಪದವೂ ಕಡಿತವಾಗಬಾರದು.
-ಕೆ.ಪಿ. ವಿಷ್ಣುವರ್ಧನ, ಕೊಡಗವಳ್ಳಿಹಟ್ಟಿ, ಹೊಳಲ್ಕೆರೆ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.