ಮಂಗಳೂರು: ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ್ದಾಗಿರುವುದರಿಂದ ಕೇಂದ್ರ ಸರ್ಕಾರದ ಸಚಿವ ಸ್ಥಾನದಲ್ಲಿರುವ ತಾವು ಯಾವುದೇ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ.
ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಎಲ್ಲ ಜನರಿಗೆ ಕುಡಿಯುವ ನೀರು ದೊರೆಯಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸುವ ಪ್ರಯತ್ನ ನಡೆಸಿದ್ದು ನಿಜ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿ ಯೋಜನೆಯ ವಿವರ ತಿಳಿಸಬೇಕು ಎಂಬ ಉದ್ದೇಶ ಹೊಂದಿದ್ದೆ. ಈಗ ಯೋಜನೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದು ಹೇಳಿದರು.
ಎತ್ತಿನ ಹೊಳೆಯಲ್ಲಿ ನೀರಿನ ಲಭ್ಯತೆಯೇ ಇಲ್ಲ ಎಂಬುದಾಗಿ ಐಐಎಸ್ಸಿ ನೀಡಿದ ವರದಿಯ ಕುರಿತು ಪ್ರಶ್ನಿಸಿದಾಗ, ‘ಸಮುದ್ರ ಮಟ್ಟದಿಂದ ಸುಮಾರು 1830 ಅಡಿ ಮೇಲ್ಭಾಗದ ಘಟ್ಟ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಒಂದು ತಿಂಗಳ ಕಾಲ ಸಂಗ್ರಹಿಸಿ ಅದನ್ನು ತಿರುಗಿಸುವ ಯೋಜನೆಗಷ್ಟೇ ನಾನು ಒಪ್ಪಿಗೆ ನೀಡಿದ್ದು. ಪ್ರಸ್ತುತ ಯೋಜನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಉಳಿದ ಪ್ರಶ್ನೆಗಳನ್ನು ಅವರು ನಿರಾಕರಿಸಿದರು.