ನವದೆಹಲಿ (ಪಿಟಿಐ): 2013ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ನಿರ್ದೇಶಕರಾದ ಪಿ. ಶೇಷಾದ್ರಿ, ಗಿರೀಶ್ ಕಾಸರವಳ್ಳಿ, ನಿರ್ಮಾಪಕ ಬಸಂತ ಕುಮಾರ್ ಹಾಗೂ ಚಿತ್ರಕತೆಗಾರ ಪಂಚಾಕ್ಷರಿ ಅವರಿಗೆ ‘ರಜತ ಕಮಲ’ಗಳು ಬಂದಿವೆ.
‘ಡಿಸೆಂಬರ್ 1’ ಕನ್ನಡ ಚಿತ್ರವು ಮೂರು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕತೆಗಾರ (ಒರಿಜಿನಲ್) ಪ್ರಶಸ್ತಿಯನ್ನು ಪಿ. ಶೇಷಾದ್ರಿ ಅವರು ಪಡೆದಿದ್ದಾರೆ. ಅವರು ರಜತ ಕಮಲದೊಂದಿಗೆ ರೂ. 50 ಸಾವಿರ ನಗದು ಪಡೆಯಲಿದ್ದಾರೆ.
ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು (ಕನ್ನಡ ವಿಭಾಗ), ಮನ್ನಣೆ ಪಡೆದಿದ್ದು ನಿರ್ದೇಶನಕ್ಕಾಗಿಯೂ ಶೇಷಾದ್ರಿ ‘ರಜತ ಕಮಲ’ದೊಂದಿಗೆ ರೂ. 1 ಲಕ್ಷ ಪಡೆಯಲಿದ್ದಾರೆ. ಇವರೊಂದಿಗೆ ನಿರ್ಮಾಪಕ ಬಸಂತಕುಮಾರ್ ‘ರಜತ ಕಮಲ’ದ ಜತೆ ರೂ. 1 ಲಕ್ಷ ನಗದು ಬಹುಮಾನ ಪಡೆಯುವರು.
ಕನ್ನಡ ಸಿನಿಮಾ ‘ಪ್ರಕೃತಿ’ಗಾಗಿ ಅತ್ಯುತ್ತಮ ಚಿತ್ರಕತೆಗಾರ ಪ್ರಶಸ್ತಿಯು ಪಂಚಾಕ್ಷರಿ ಅವರಿಗೆ ಸಂದಿದೆ. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯ ಆಧರಿಸಿದ ‘ಅನಂತಮೂರ್ತಿ–ನಾಟ್ ಎ ಬಯಾಗ್ರಫಿ.. ಬಟ್ ಎ ಹೈಪೋಥಿಸಿಸ್’ ಇಂಗ್ಲಿಷ್ ಸಾಕ್ಷ್ಯಚಿತ್ರದ ನಿರ್ದೇಶನಕ್ಕಾಗಿ ಗಿರೀಶ್ ಕಾಸರವಳ್ಳಿ ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿ ಹಂಚಿಕೊಂಡಿದ್ದಾರೆ.
‘ಶಾಹಿದ್’ ಚಿತ್ರದ ನಟನೆಗಾಗಿ ರಾಜ್ಕುಮಾರ್ ರಾವ್ ಮತ್ತು ಮಲಯಾಳಂ ಚಿತ್ರ ‘ಪೆರಾರಿಯಾಥವರ್’ದ ನಟನೆಗಾಗಿ ಸೂರಜ್ ವೆಂಜರಮೂಡು ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಶಾಹಿದ್’ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೇ 3ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕವಿ ಗುಲ್ಜಾರ್ ಅವರಿಗೆ ಅದೇ ದಿನ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.