ಬೆಂಗಳೂರು: ಪಶ್ಚಿಮಘಟ್ಟದ ವಿವಿಧ ಜಾತಿಯ ಕಪ್ಪೆಗಳ ಕೂಗನ್ನು ಆಧರಿಸಿದ ವಿಶಿಷ್ಟ ಧ್ವನಿಮುದ್ರಿಕೆ ‘ಮಂಡೂಕವಾಣಿ’ಯನ್ನು ಉಭಯಚರಗಳ ಸಂಶೋಧಕರ ತಂಡವೊಂದು ಸಿದ್ಧಪಡಿಸಿದೆ.
ಪಶ್ಚಿಮಘಟ್ಟದ ಆ ಕಪ್ಪೆಗಳ ಧ್ವನಿಯನ್ನು ವನ್ಯಜೀವಿ ಪ್ರಿಯರು ಇನ್ನು ಮುಂದೆ ಮನೆಯಲ್ಲೇ ಕುಳಿತು ಕೇಳಬಹುದಾಗಿದೆ. ಸುಮಾರು 72 ವಿಧದ ಕಪ್ಪೆಗಳ ಮಾಹಿತಿ ‘ಮಂಡೂಕವಾಣಿ’ಯಲ್ಲಿ ಇರಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕಪ್ಪೆಗಳ ಕೂಗಿನ ಧ್ವನಿಯನ್ನು ಮುದ್ರಿಸಿಕೊಳ್ಳಲಾಗಿದೆ. ಪ್ರತಿಯೊಂದು ವಿಧದ ಕಪ್ಪೆಯ ಕೂಗೂ ವಿಶಿಷ್ಟವಾಗಿದ್ದು, ಧ್ವನಿಯಲ್ಲೇ ತಮ್ಮ ಗುರುತನ್ನು ಹೇಳುತ್ತವೆ. ಆ ಧ್ವನಿಯಿಂದಲೇ ಉಭಯಚರ ತಜ್ಞರು ಈ ಕಪ್ಪೆ ಇಂತಹ ಪ್ರಭೇದಕ್ಕೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಬಲ್ಲರು.
ಕಪ್ಪೆಗಳ ಮೇಲೆ ಇಂತಹ ಧ್ವನಿ ಮುದ್ರಿಕೆ ತರುತ್ತಿರುವುದು ದೇಶದಲ್ಲಿ ಇದೇ ಮೊದಲು. ಧ್ವನಿಯ ಮೇಲೆಯೇ ಕಪ್ಪೆಗಳ ವರ್ತನೆ ಹಾಗೂ ಅವುಗಳ ಅಗತ್ಯದ ಸುಳಿವು ಸಹ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಈ ಧ್ವನಿಮುದ್ರಿತ ಮಾರ್ಗದರ್ಶಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ ವ್ಯಕ್ತಿಗಳಿಗೆ ಕಪ್ಪೆಗಳ ಆವಾಸಸ್ಥಾನಗಳ ಪತ್ತೆಗೂ ನೆರವಾಗಲಿದೆ.
ಉಭಯಚರಗಳ ಸಂಶೋಧಕರಾದ ರಮ್ಯಾ ಬದರಿನಾಥ್, ಕೆ.ಎಸ್. ಶೇಷಾದ್ರಿ, ಎಸ್.ರಮಿತ್, ಕೆ.ವಿ. ಗುರುರಾಜ್ ಜತೆಯಾಗಿ ಈ ಸಿ.ಡಿಯನ್ನು ಸಿದ್ಧಪಡಿಸಿದ್ದಾರೆ. ರಿಚ್ಮಂಡ್ ರಸ್ತೆಯ ‘ಜಾಗ ಸ್ಟಾರ್ಟ್ ಅಪ್’ನಲ್ಲಿ ಏ. 19ರಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ವಿ.ವಿ ಪ್ರಾಧ್ಯಾಪಕ ಡಾ. ಎಸ್. ಸುಬ್ರಹ್ಮಣ್ಯ ಅವರು ಸಿ.ಡಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.