ಚಿಂತಾಮಣಿ: ಕನ್ನಡವು ವಿಶ್ವದಲ್ಲಿಯೇ ನಿರಂತರವಾಗಿ ಸಾಹಿತ್ಯ ಸೃಷ್ಟಿಸುವ ಭಾಷೆಯಾಗಿದೆ. ಕನ್ನಡ ಭಾಷೆ ತನ್ನತನದ ಜತೆಗೆ ಇತರೆ ಭಾಷೆಗಳನ್ನು ಸಹ ಅರಗಿಸಿಕೊಂಡಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಆರ್ವಿಯಸ್ ಸುಂದರಂ ಅಭಿಪ್ರಾಯ ಪಟ್ಟರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯ ಕೂಟದ ಕಾರ್ಯಕ್ರಮದಲ್ಲಿ ‘ಕನ್ನಡ ಭಾಷಾ ಸಾಹಿತ್ಯದ ಹಿರಿಮೆ’ ಕುರಿತು ಮಾತನಾಡಿ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿಯಬೇಕಾದರೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಮೊದಲು ತಿಳಿಯಬೇಕು. ಕನ್ನಡ ಭಾಷೆ ಚೆನ್ನಾಗಿ ಕಲಿತರೆ ಇತರೆ ಯಾವುದೇ ಭಾಷೆಯನ್ನಾದರೂ ಸುಲಭವಾಗಿ ಮಾತನಾಡಬಹುದು ಎಂದರು.
ಕನ್ನಡ ಭಾಷೆಯಲ್ಲಿ ಕವಯತ್ರಿಯರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 12ನೇ ಶತಮಾನದಲ್ಲೇ ಕನ್ನಡದಲ್ಲಿ ಸುಮಾರು 30 ಕವಯತ್ರಿಗಳಿದ್ದರು. ಸಾಹಿತ್ಯದ ದೊಡ್ಡ ವಿಶ್ವಕೋಶವಾದ ಜಾನಪದ ಸಾಹಿತ್ಯದಲ್ಲೂ ಮಹಿಳೆಯರ ಪಾತ್ರವಿರುವುದು ಕನ್ನಡದ ಹಿರಿಮೆ ಎಂದು ತಿಳಿಸಿದರು.
ಸುಮಾರು 250 ಕಲೆಗಳು ನಮ್ಮಲ್ಲಿ ಹೆಸರಿಸಿಕೊಂಡಿವೆ. ಇತರೆ ಯಾವ ದೇಶದಲ್ಲೂ ಇಷ್ಟೊಂದು ಜನಪದ ಕಲೆ ಸಾಹಿತ್ಯವಿಲ್ಲ. ಕನ್ನಡದ ಎಲ್ಲ ಅಂಕಿಗಳು ಸೊನ್ನೆಯಿಂದ ಹುಟ್ಟಿವೆ ಎಂದು ಕವಿ ಕುಮುದೇಂದು ಬಹಳ ಹಿಂದೆಯೇ ತಿಳಿಸಿದ್ದಾರೆ. ಮಲೆ ಮಾದೇಶ್ವರ, ಮಂಟೆಸ್ವಾಮಿ ಮತ್ತಿತರರ ಮಹಾಕಾವ್ಯಗಳು ಆಂಗ್ಲ ಭಾಷೆಗೆ ಅನುವಾದಗೊಂಡಿವೆ ಎಂದರು.
ನಗರದ ಸಾಯಿ ಕಲಾನಿಕೇತನ ತಂಡದಿಂದ ಭರತನಾಟ್ಯ ನಡೆಯಿತು. ಸಾಹಿತ್ಯಕೂಟದ ಅಧ್ಯಕ್ಷ ಬಿ.ಶ್ರೀರಾಮಮೂರ್ತಿ,ಕಾರ್ಯದರ್ಶಿ ಜಿ.ಜಯರಾಂ, ಜಿ.ಎಚ್.ವೆಂಕಟೇಶಮೂರ್ತಿ, ಆನಂತಾಚಾರ್, ಸಿ.ಬಿ.ಹನುಮಂತಪ್ಪ, ರಘುನಾಥರೆಡ್ಡಿ, ಅಶ್ವತ್ಥಮ್ಮ ಮತ್ತಿತರರು ಭಾಗವಹಿಸಿದ್ದರು.
ವೈ.ಜಿ.ನಾರಾಯಣ್ ಸ್ವಾಗತಿಸಿದರು. ಕೆ.ಎಸ್.ಗಣೇಶ್ ವರದಿ ಮಂಡಿಸಿದರು. ಗುರು ನಿರೂಪಿಸಿದರು.