ದೇವನಹಳ್ಳಿ: ಮುರಿದಿರುವ ಬಾಗಿಲು, ಮೈದಾನದಲ್ಲಿ ಬೆಳೆದಿರುವ ಗಿಡಗಂಟಿ, ಕೊಚ್ಚಿ ಹೋಗಿರುವ ಟ್ರ್ಯಾಕ್ ಮೇಲಿನ ಮಣ್ಣು, ಮೈದಾನದ ಮಧ್ಯೆ ಉಳಿದುಕೊಂಡಿರುವ ವಿದ್ಯುತ್ ಕಂಬಗಳು, ಅನೈತಿಕ ಚಟುವಟಿಕೆಗೆ ಸಾಕ್ಷಿಯಾಗಿ ಕಾಣುವ ವಿವಿಧ ವಸ್ತುಗಳು.
ಇಲ್ಲಿನ ತಾಲ್ಲೂಕು ಕೇಂದ್ರದಲ್ಲಿರುವ ಏಕೈಕ ಕ್ರೀಡಾಂಗಣದ ದುಸ್ಥಿತಿ ಇದು. 15 ತಿಂಗಳ ಹಿಂದೆ ಉದ್ಘಾಟನೆಗೊಂಡ ಕ್ರೀಡಾಂಗಣ ಸಮರ್ಪಕ ನಿರ್ವಹಣೆ ಇಲ್ಲದೆ ಕ್ರೀಡಾ ಚಟುವಟಿಕೆಗಳಿಗೆ ಸದುಪಯೋಗವಾಗದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ.
ಬಹುನಿರೀಕ್ಷಿತ ಕ್ರೀಡಾಸಕ್ತರ ಆಶಯದಂತೆ ಇಲ್ಲಿನ ಪ್ರಥಮ ದರ್ಜೆ ಕಾಲೇಜು ಬಳಿ ನಿರ್ಮಾಣಗೊಂಡಿರುವ ತಾಲ್ಲೂಕಿನ ಏಕೈಕ ಉತ್ತಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಮತ್ತು ಆಶಯ ದೊಂದಿಗೆ 20 ಎಕರೆ ವಿಸ್ತೀರ್ಣದಲ್ಲಿ ₨ 74 ಲಕ್ಷ ವೆಚ್ಚದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ತರಾತುರಿ ಯಲ್ಲಿ ಈ ಕ್ರೀಡಾಂಗಣ ವನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ, ಕ್ರೀಡಾಂಗಣದ ಸ್ಥಿತಿಗತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದುವರೆಗೂ ಗಮನ ಹರಿಸುತ್ತಿಲ್ಲ ಎಂದು ಹಿರಿಯ ಕ್ರೀಡಾಪಟುಗಳು ದೂರುತ್ತಾರೆ.
ಕ್ರೀಡಾಂಗಣದಲ್ಲಿ ಅಳವಡಿಸಿರುವ ‘ಸ್ಟ್ಯಾಂಡರ್ಡ್ ಟ್ರ್ಯಾಕ್’ ವ್ಯಾಪ್ತಿಯಲ್ಲಿ ಹಾದುಹೋಗಿರುವ ವಿದ್ಯುತ್ ಕಂಬಗಳನ್ನು ಇದುವರೆಗೂ ಸ್ಥಳಾಂತರಗೊಂಡಿಲ್ಲ. ನಿರ್ಮಿಸಿರುವ ಟ್ರ್ಯಾಕ್ಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಕೆಲ ದಿನಗಳ ಹಿಂದೆ ಸುರಿದ ಅಲ್ಪಸ್ವಲ್ಪ ಮಳೆಗೆ ಟ್ರ್ಯಾಕ್ ಮೇಲಿನ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಟ್ರ್ಯಾಕ್ಗೆ ಅಳವಡಿಸಿರುವ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಅಭ್ಯಾಸ ನಿರತ ಕ್ರೀಡಾ ಪಟುಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿವೆ. ಟ್ರ್ಯಾಕ್ನಿಂದ ಹೊರ ಹರಿಯುವ ನೀರು ಸರಾಗವಾಗಿ ಇತರೆಡೆ ಹರಿಯಲು ವ್ಯವಸ್ಥೆಯಾಗಿಲ್ಲ ಎಂಬುದು ಕ್ರೀಡಾಪಟುಗಳ ದೂರು.
ಕ್ರೀಡಾಂಗಣದ ಒಂದು ಬದಿಯಲ್ಲಿ ನಿರ್ಮಾಣವಾಗಿರುವ ಪೆವಿಲಿಯನ್ ಹಿಂಬದಿಯಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೊಠಡಿ ನಿರ್ಮಿಸಲಾಗಿದೆ. ಆದರೆ ನೀರಿನ ವ್ಯವಸ್ಥೆಯಾಗಿಲ್ಲ. ಯಾವುದೇ ಕೊಠಡಿಗಳಿಗೆ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲ. ಬಾಗಿಲು ಕಿಟಕಿಗಳನ್ನು ಕಿಡಿಗೇಡಿಗಳು ಮುರಿದಿದ್ದು, ಅನೈತಿಕ ಚಟುವಟಿಕೆಗೆ ಕುರುಹುಗಳಾಗಿ ಮದ್ಯದ ಬಾಟಲಿಗಳು ಇತರೆ ಪರಿಕರಗಳು ಸಾಕ್ಷಿಯಾಗಿ ಕಾಣುತ್ತವೆ.
ತಾಲ್ಲೂಕಿನಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಮತ್ತು ಭಾಗವಹಿಸುತ್ತಿರುವ ಅನೇಕ ಪ್ರತಿಭಾನ್ವಿತ ಕ್ರೀಡಾ ಪಟುಗಳಿದ್ದಾರೆ. ರಾಜ್ಯಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಕೊರಳಿಗೆ ಹಾಕಿಸಿ ಕೊಂಡವರ ಆಟಗಾರ ರಿಗೇನು ಕೊರತೆಯಿಲ್ಲ. ಆದರೆ. ಕ್ರೀಡಾಪಟುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸದಿದ್ದರೆ ಪ್ರತಿನಿತ್ಯ ಅಭ್ಯಾಸ ಮಾಡುವುದು ಹೇಗೆ ಎಂದು ಸ್ಥಳೀ ಯರು ಪ್ರಶ್ನಿಸುತ್ತಾರೆ.
ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ವಿಶ್ವವಿದ್ಯಾಲಯದ ಅಂತರ ವಿಶ್ವವಿದ್ಯಾನಿಲಯ ಕ್ರೀಡೆಗಳು ವಾರ್ಷಿಕ ನಿರಂತರ ವಾಗಿರುತ್ತವೆ. ಜತೆಗೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ‘ಪೈಕಾ’ ಹಾಗೂ ದಸರಾ ಕ್ರೀಡಾಕೂಟ ಎಲ್ಲಾ ವಯೋಮಾ ನದಲ್ಲಿ ನಡೆಸಲಾಗುತ್ತಿದೆ. ಪ್ರಮುಖವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ವಾರ್ಷಿಕ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡೆ ಗಳಿಗಾಗಿ ಶಾಲೆಗಳಲ್ಲಿ ಪೂರ್ವ ತರಬೇತಿ ನಡೆಸಲಾಗುತ್ತಿದೆ.
ಪ್ರಸಕ್ತ ಸಾಲಿನ ಜುಲೈ ಕೊನೆಯ ವಾರದಲ್ಲಿ ಹೋಬಳಿ ಮಟ್ಟದ ಕ್ರೀಡೆಗಳು ಆರಂಭಗೊಳ್ಳಲಿವೆ. ಆದರೆ, ಸಾರ್ವಜನಿಕರ ಬಳಕೆಗೆ ಲಕ್ಷಾಂ ತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕ್ರೀಡಾಂಗಣ ಸಕಾಲದಲ್ಲಿ ಕ್ರೀಡಾ ಚಟುವಟಿಕೆಗೆ ಬಳಕೆಯಾಗದಿದ್ದರೆ ಇದನ್ನು ನಿರ್ಮಿಸಿಯೂ ಪ್ರಯೋಜನವಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.