ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಲೋಕಕ್ಕೆ ಅರ್ಪಿಸಿಕೊಂಡ ಸಂತೃಪ್ತಯಾನ

Last Updated 22 ಜುಲೈ 2015, 19:55 IST
ಅಕ್ಷರ ಗಾತ್ರ

ಮಂಗಳೂರು: ಸದಾ ಶುಭ್ರ ಶ್ವೇತ ವಸ್ತ್ರದಿಂದಲೇ ಕಂಗೊಳಿಸುತ್ತಿದ್ದ ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಜಯಲಕ್ಷ್ಮಿ ಆಳ್ವ  ಮಾತುಗಾರ್ತಿಯಲ್ಲ. ಹುಟ್ಟಿದ್ದು, ಬಾಲ್ಯವನ್ನು ಕಳೆದಿದ್ದೆಲ್ಲವೂ ತಮಿಳು ನಾಡಿನಲ್ಲೇ. ಅವರು ತಮ್ಮ ವಿನೀತ ಭಾವದ ನಯವಿನಯ ಮತ್ತು ಆಪ್ತತೆ ಯಿಂದಲೇ ಎಲ್ಲರಿಗೂ ಪರಿಚಿತರು.

ಪ್ರಶಾಂತವಾದ ಮುಖ ಅವರ ಸೌಂದರ್ಯವನ್ನು 84ರ ಇಳಿ ವಯಸ್ಸಿನಲ್ಲಿಯೂ ಕಡಿಮೆ ಮಾಡಿರಲಿಲ್ಲ. ಭರತನಾಟ್ಯ ನೃತ್ಯ ಪ್ರಕಾರದಲ್ಲಿ ಕಲಬೆರಕೆಯನ್ನು ಇಷ್ಟಪಡದೇ ಇದ್ದ ಅವರು, ಶ್ರೀದೇವಿ ನೃತ್ಯ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ನೃತ್ಯ ಪಾಠ ಮಾಡುತ್ತಿದ್ದರು.  ಕಳೆದ ತಿಂಗಳಷ್ಟೇ ಚೆನ್ನೈನ ಸುದರ್ಶನಾ ಎಂಬ ಹುಡುಗಿಯ ರಂಗಪ್ರವೇಶಕ್ಕೆ ಸಂಬಂಧಿಸಿದಂತೆ ಸ್ವಯಂ ಆಸ್ಥೆಯಿಂದ ತರಬೇತಿ ನೀಡಿದ್ದ ಅವರು, ರಂಗಪ್ರವೇಶದ ಮಾರ್ಗವನ್ನು ಸಂಪೂರ್ಣವಾಗಿ ಅಭ್ಯಸಿಸುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದರು. 

ದಂಡಾಯುಧ ಪಾಣಿಪಿಳ್ಳೆಯ ಅವರ ಪ್ರಥಮ ಶಿಷ್ಯೆ ಯಾಗಿದ್ದ ಅವರು ತಾವು ಕಲಿತ ರಂಗ ಪ್ರವೇಶ ಮಾರ್ಗವನ್ನು ಸುದರ್ಶನಾಗೆ ಹೇಳಿಕೊಟ್ಟು ಅದು ವೇದಿಕೆಯಲ್ಲಿ ಸಾಕಾರಗೊಂಡಾಗ ಸಂತೃಪ್ತಿ ವ್ಯಕ್ತಪಡಿ ಸಿದ್ದರು. 1933ರ ಅಕ್ಟೋಬರ್‌ 25 ರಂದು ತಮಿಳುನಾಡಿನ ಕುಂಭಕೋಣಂ ನಲ್ಲಿ ಜನಿಸಿದ್ದ ಅವರು 1948ರಲ್ಲಿ ರಂಗಪ್ರವೇಶ ಮಾಡಿದ್ದರು.  ಮೃಣಾಲಿನಿ ಸಾರಾಭಾಯಿ ಅವರ ದರ್ಪಣ ತಂಡದಲ್ಲಿದ್ದ ಅವರು ರೋಮ್‌, ಇಟಲಿ, ಸ್ವಿಟ್ಜರ್ಲೆಂಡ್‌, ಜರ್ಮನಿ, ರಷ್ಯಾ ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದವರು.

ಸ್ವರ್ಣಂ ಸರಸ್ವತಿ ಮತ್ತು ಗೌರಿಅಮ್ಮಾಳ್‌ ಅವರಿಂದ ಅಭಿನಯವನ್ನು ಮತ್ತು ಕರುಣಾಕರ ಫಣಿಕ್ಕರ್‌ ಅವರಿಂದ ಕಥಕ್ಕಳಿ ಅಭ್ಯಾಸವನ್ನು ಮಾಡಿದ್ದರೂ ಭರತನಾಟ್ಯದ ಪರಿಶುದ್ಧತೆಗೆ ಸದಾ ಬದ್ಧರಾಗಿದ್ದವರು. ‘1974ರಲ್ಲಿ ಅವರು ಪತಿಯೊಂದಿಗೆ ಮಂಗಳೂರಿನಲ್ಲಿ ಬಂದು ನೆಲೆಸಿದಾಗ ಕರಾವಳಿಗೂ ಅವರ ಪ್ರತಿಭೆಯ ಪರಿಚಯವಾಯಿತು. ನಟುವಾಂಗ ಬಹಳ ಚೆನ್ನಾಗಿ ನಿರ್ವಹಿಸುತ್ತಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಉಳ್ಳಾಲ ಮೋಹನ್‌ ಕುಮಾರ್‌.

ಮುಂಬೈನಲ್ಲಿ ಅವರು ನೃತ್ಯ ಪ್ರದರ್ಶನ ನೀಡಿದ್ದಾಗ ಮಂಗಳೂರು ಮೂಲದ ಕಲಾಸಕ್ತ ರಾಮಕೃಷ್ಣ ಆಳ್ವ ಅವರು ಜಯಲಕ್ಷ್ಮಿ ಅವರನ್ನು ಮೆಚ್ಚಿ ಮದುವೆಯಾದರು. ರಾಜ್ಯದ ಉನ್ನತ ಪ್ರಶಸ್ತಿ ಎಂದೇ ಗುರುತಿಸಿಕೊಂಡ ಶಾಂತಲಾ ಪ್ರಶಸ್ತಿ, ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ನೃತ್ಯಭಾರತಿ ಮತ್ತಿತರ ಹಲವಾರು ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿದ್ದವು.
*
ಅಗಲಿದ ಕಲಾವಿದೆ

ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಜಯಲಕ್ಷ್ಮಿ ಆಳ್ವ ಅವರು ಮಂಗಳವಾರ ತಡರಾತ್ರಿ ನಿಧನರಾದರು. ಎಂದಿನಂತೆ ಶ್ರೀದೇವಿ ನೃತ್ಯ ಕೇಂದ್ರದ ತರಗತಿಗಳನ್ನು ನಿರ್ವಹಿಸಿ, ಕೆಲವು ಸಭೆಗಳಲ್ಲಿ ಭಾಗವಹಿಸಿದ್ದರು. ಬಳಿಕ ರೂಢಿಯಂತೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಎಲ್ಲ ತಪಾಸಣೆಗಳನ್ನು ನಡೆಸಿದ ವೈದ್ಯರು ಅವರ ಆರೋಗ್ಯ ಚೆನ್ನಾಗಿದೆ ಎಂದೂ ಹೇಳಿದ್ದರು. ಆದರೆ ಆಸ್ಪತ್ರೆಯಲ್ಲಿಯೇ ಅವರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಅವರಿಗೆ ಮಿದುಳಿ ನಲ್ಲಿ ರಕ್ತ ಸ್ರಾವ ಆಗಿರುವು ದಾಗಿ ಹೇಳಿದ್ದಾರೆ. ಅವರಿಗೆ ಮಗ ಅಮರ್‌ ಆಳ್ವ, ಮಗಳು ಆರತಿ ಶೆಟ್ಟಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT