‘ಯಹಾ ಹರ್ ಕದಮ್ ಕದಮ್ ಪೆ ಧರ್ತಿ ಬದ್ಲೆ ರಂಗ್, ಯಹಾ ಕಿ ಬೋಲಿ ಮೇ ರಂಗೋಲಿ ಸಾತ್ ರಂಗ್, ಧಾನಿ ಪಗ್ಡಿ ಪೆಹ್ನೆ ಮೌಸಮ್ ಹೇ, ನೀಲಿ ಚಾದರ್ ತಾನೆ ಅಂಬರ್ ಹೇ, ನದಿ ಸುನ್ಹೇರಿ ಹರಾ ಸಮುಂದರ್ ಹೇ ರೆ ಸಜಿಲಾ ದೇಸ್ ರಂಗಿಲಾ ರಂಗಿಲಾ ದೇಸ್ ಮೇರಾ ರಂಗಿಲಾ’ ‘ಮಾ ತುಜೇ ಸಲಾಂ...’ ಮತ್ತು ‘ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ, ಹಮ್ ಬುಲ್ಬುಲ್ ಹೇ ಇಸ್ ಕಿ ಯೇ ಗುಲಸಿತಾನ್ ಹಮಾರಾ ...’ ಗೀತೆಗಳಿಗೆ ಜಿಎಸ್ಎಸ್ಎಸ್ ಮಹಿಳಾ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರಿಗೆ ಖುಷಿ ನೀಡಿತು.
ಕೆ.ಆರ್. ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆದಿಚುಂಚನಗಿರಿ ಕ್ಷೇತ್ರ ಮಹಿಮೆ ಸಾರುವ ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು.
ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ‘ನಾ ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳು ನಗೆ, ನಾ ನುಡಿವ ಮೊದಲೇನೆ ತೊದಲುತಿದೆ ಹೃದಯ ಒಳಗೊಳಗೆ...’ ಹಾಡಿನ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.
ವಿದ್ಯಾವಿಕಾಸ್ ಪ್ರಥಮದರ್ಜೆ ಕಾಲೇಜಿನವರು ಮದ್ಯಪಾನ ಮತ್ತು ಧೂಮಪಾನ ಹಾನಿ ಸಂದೇಶ ಸಾರುವ ಮತ್ತು ನಂಜನಗೂಡಿನ ಹೆಡಿಯಾಲ ಕಾಲೇಜಿನವರು ವಂದೇ ಮಾತರಂ ಗೀತೆಗೆ ನರ್ತನ ಮಾಡಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಕ್ಕಳು ದೇಶ ಕಾಯುವ ಯೋಧರ ಕುರಿತ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕ ಸಮುದಾಯವನ್ನು ದೇಶ ಪ್ರೇಮದ ಅಲೆಯಲ್ಲಿ ತೇಲಿಸಿದರು. ತ್ರಿವರ್ಣ ಧ್ವಜ, ಪರಿಸರ ಸೂಚಕ ಹಸಿರು ಬಣ್ಣ, ಯೋಧರ ವಸ್ತ್ರ, ದಟ್ಟ ನೀಲಿ, ಶುಭ್ರ ಬಿಳಿ ಮೊದಲಾದ ವೇಷಭೂಷಣಗಳು ರಾರಾಜಿಸಿದವು. ಗ್ಯಾಲರಿಯಲ್ಲಿ
ಕಿಕ್ಕಿರಿದು ಸೇರಿದ್ದ ಯುವಪಡೆ ನೃತ್ಯ ಮೋಡಿಗೆ ನಿಂತಲ್ಲೇ ಹೆಜ್ಜೆ ಹಾಕಿದರು.