ಕಠ್ಮಂಡು (ಪಿಟಿಐ): ಭಾರತ– ನೇಪಾಳ ಗಡಿ ಭಾಗದಲ್ಲಿ ಹೊಸ ಸಂವಿಧಾನ ವಿರೋಧಿ ಪ್ರತಿಭಟನೆಗಳು ಮುಂದುವರಿದ ಕಾರಣ ನೇಪಾಳದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಉಂಟಾಗಿದೆ.
ಬಿಕ್ಕಟ್ಟು ನಿವಾರಣೆಗಾಗಿ ನೇಪಾಳ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಗಾಗಿ ಟೆಂಡರ್ ಆಹ್ವಾನಿಸಿದೆ. ಆಸಕ್ತ ಸಂಸ್ಥೆಗಳು ಟೆಂಡರ್ ಭರ್ತಿ ಮಾಡಿ, ಮೂರು ದಿನಗಳ ಒಳಗೆ ಇಂಧನ ಪೂರೈಸುವಂತೆ ನೇಪಾಳ ತೈಲ ನಿಗಮ (ಎನ್ಒಸಿ) ಗಡುವು ನಿಗದಿ ಪಡಿಸಿದೆ.
ನೇಪಾಳಕ್ಕೆ ಇಂಧನ ಪೂರೈಸಲು ಭಾರತ ನಿರ್ಬಂಧ ವಿಧಿಸಿದ್ದು, ಎನ್ಒಸಿ ಶೀಘ್ರ ಪರ್ಯಾಯ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ಸಚಿವಾಲಯ ಕಳೆದ ವಾರವೇ ಸೂಚಿಸಿತ್ತು ಎಂದು ‘ದಿ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.
ಪ್ರಚಂಡ ವಾಗ್ದಾಳಿ: ಹೊಸ ಸಂವಿಧಾನದ ನೆಪದಲ್ಲಿ ವಿದೇಶಿ ಮತ್ತು ರಾಷ್ಟ್ರೀಯ ಏಜೆಂಟರು ಕೋಮುಸೌಹಾರ್ದ ಕದಡುತ್ತಿದ್ದಾರೆ ಎಂದು ಮಾವೊವಾದಿ ನಾಯಕ ಪ್ರಚಂಡ ಭಾರತದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಈ ನಡುವೆ ನೇಪಾಳದ ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಅವರು ಗಡಿ ಭಾಗದಲ್ಲಿ ಭಾರತ ನಿರ್ಬಂಧ ವಿಧಿಸಿರುವುದು ಅಮಾನವೀಯವಾದದ್ದು ಎಂದು ಟೀಕಿಸಿದ್ದಾರೆ.