ದಾವಣಗೆರೆ: ನೇಪಾಳ ಪ್ರವಾಸಕ್ಕೆ ತೆರಳಿದ್ದ ನಗರದ ಡಿಸಿಎಂ ಟೌನ್ಶಿಪ್ ನಿವಾಸಿ ಸುಶೀಲಾ ಹಾಗೂ ಅವರ ಕುಟುಂಬದ 6 ಮಂದಿ ಸದಸ್ಯರು ಮೊಬೈಲ್ ಸಂರ್ಪರ್ಕಕ್ಕೆ ಸಿಗದ ಕಾರಣ ಅವರ ಕುಟುಂಬವರ್ಗ ಆತಂಕದಲ್ಲಿದೆ.
ದಾವಣಗೆರೆಯ ಎಲ್ಐಸಿ ಸಂಸ್ಥೆಯಲ್ಲಿ ಅಧಿಕಾರಿಯಾಗಿರುವ ಸುಶೀಲಾ (54) ಹಾಗೂ ಬೆಂಗಳೂರಿನ ಬನಶಂಕರಿ ಮೂರನೇ ಹಂತದಲ್ಲಿರುವ ಕುಟುಂಬದ ಸದಸ್ಯರಾದ ರಾಘವೇಂದ್ರ, ಪರಿಮಳಾ, ಶ್ರೀಕಾಂತ್, ಸೌಮ್ಯಾ ಹಾಗೂ ಅವರ ಇಬ್ಬರು ಮಕ್ಕಳು ಏ. 22ರಂದು ಕಠ್ಮಂಡುವಿಗೆ ಪ್ರವಾಸ ತೆರಳಿದ್ದರು.
‘ಶನಿವಾರ ಕಠ್ಮಂಡುವಿನ ಮುಕ್ತಿನಗರದಿಂದ ಬೆಳಿಗ್ಗೆ 11 ಗಂಟೆಗೆ ಸುಶೀಲಾ ಅವರು ನನಗೆ ದೂರವಾಣಿ ಕರೆಮಾಡಿ, ಮುಂದಿನ ಪ್ರವಾಸಕ್ಕೆ ವಿಮಾನ ಸಿಗುತ್ತಿಲ್ಲ. ಹಾಗಾಗಿ, ಟ್ಯಾಕ್ಸಿ ಮೂಲಕ ಪ್ರವಾಸ ಮುಂದುವರಿಸುತ್ತಿದ್ದೇವೆ. ಎಲ್ಲರೂ ಕ್ಷೇಮವಾಗಿದ್ದೇವೆ ಎಂದೂ ತಿಳಿಸಿದ್ದರು’ ಎಂದು ಸುಶೀಲಾ ಅವರ ಸಹೋದರ ನರಹರಿ ಗುರುವಾರ ಮಾಹಿತಿ ನೀಡಿದರು.
‘ಆದರೆ ನೇಪಾಳದಲ್ಲಿ ಭೂಕಂಪನವಾದ ಸುದ್ದಿ ಟಿ.ವಿ. ಚಾನೆಲ್ಗಳಲ್ಲಿ ನೋಡಿ, ಕೂಡಲೇ ಮೊಬೈಲ್ಗೆ ಬಂದ ನಂಬರ್ಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಲಿಲ್ಲ. ಇದರಿಂದಾಗಿ ನಮಗೆ ಆತಂಕವಾಗಿದೆ. ರಾಜ್ಯ ಸರ್ಕಾರ ಕೂಡಲೇ ಕುಟುಂಬದ ನೆರವಿಗೆ ದಾವಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.