ಅಪರೂಪದ ವಿದಾಯ: ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಗಂಣದಲ್ಲಿ ಮಂಜುನಾಥ್ ಅವರಿಗೆ ರಾಜ್ಯ ವಕೀಲರ ಪರಿಷತ್ ವತಿಯಿಂದ ಭಾವಪೂರ್ಣ ಬೀಳ್ಕೊಡೆಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರು, ಮಂಜುನಾಥ್ ಅವರು ಬಾರ್ ಮತ್ತು ಬೆಂಚ್ಗಳ ನಡುವಿನ ಸಮನ್ವಯಕಾರರಾಗಿ ಅಪಾರ ಜನಮನ್ನಣೆ ಗಳಿಸಿದ್ದರು ಎಂದು ಶ್ಲಾಘಿಸಿದರು.
ವಿಷಾದ: ಮಂಜುನಾಥ್ ಅವರ ಸೇವಾ ಅವಧಿಯಲ್ಲಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿಸಿದ್ದನ್ನು ಸ್ಮರಿಸಿದ ವಘೇಲಾ ಅವರು, ಈ ದೇಶದಲ್ಲಿ ನ್ಯಾಯಮೂರ್ತಿಗೆ ನ್ಯಾಯವೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಂಜುನಾಥ್ ಅವರಿಗೆ ಅನ್ಯಾಯವಾಗಿದೆ. ಇದು ಬೇರೆ ಯಾರಿಗೂ ಆಗಬಾರದು. ಇದನ್ನು ರಿಪೇರಿ ಮಾಡಲು ಆಗುವುದಿಲ್ಲ ಎಂದು ನೋವಿನಿಂದ ಹೇಳಿದರು.
ಬೀಳ್ಕೊಡುಗೆ ಸ್ವೀಕರಿಸಿದ ಮಾತನಾಡಿದ ಮಂಜುನಾಥ್ ಅವರು, ‘ಓ ದೇವರೇ ನನ್ನ ಶತ್ರುಗಳನ್ನು ಕ್ಷಮಿಸಿ ಬಿಡು’ ಎಂದು ಹೇಳಿದರು.
‘ಹಾಲಿ ನ್ಯಾಯಮೂರ್ತಿಗಳ ಕುತಂತ್ರದಿಂದ ನನಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿತು. ಕೇರಳದ ಕ್ರೈಂ ನ್ಯೂಸ್ ಪತ್ರಿಕೆಯಲ್ಲಿ ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾನೆಂದು ಸುಳ್ಳು ವರದಿ ಪ್ರಕಟಿಸಿ, ದೇಶದಾದ್ಯಂತ ಅಪಪ್ರಚಾರ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನೂ ಸುಪ್ರೀಂಕೋರ್ಟ್ನಲ್ಲಿ ತಡೆ ಹಿಡಿಯಲಾಯತು. ಇದು ಬೇರೆ ಯಾರಿಗೂ ಆಗಬಾರದು. ಪ್ರಾಮಾಣಿಕವಾಗಿ 14 ವರ್ಷ 4 ತಿಂಗಳು ಕೆಲಸ ಮಾಡಿದ್ದೇನೆ, ನನಗೆ ಯಾರ ಮೇಲೂ ದ್ವೇಷ ಇಲ್ಲ’ ಎಂದು ಗದ್ಗದಿತರಾಗಿ ಹೇಳಿದರು.
ಕೆಲವರು ನನ್ನನ್ನು ಅಸಮರ್ಥ ಎಂದು ಟೀಕಿಸಿದ್ದಾರೆ. ನಾನು ನೀಡಿರುವ 10 ಸಾವಿರಕ್ಕಿಂತ ಹೆಚ್ಚಿನ ತೀರ್ಪುಗಳೇ ನನ್ನ ಸಾಮರ್ಥ್ಯದ ಬಗ್ಗೆ ಉತ್ತರ ಹೇಳುತ್ತವೆ ಎಂದರು.