-ಇದೇನು ಇಷ್ಟೊಂದು ತಪ್ಪುಗಳು! ಇದನ್ನು ಯಾರು ಬರೆದಿರಬಹುದು? ಏಕೆ ಬರೆದಿರಬಹುದು ಎಂದು ಯೋಚಿಸುತ್ತಿರುವಿರಾ? ಇದೊಂದು ಅಂಚೆ ಪತ್ರ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಸದಸ್ಯರಿಗೆ ನೀಡಿರುವ ಆಹ್ವಾನ. ಇದನ್ನು ಬರೆದಿರುವುದು ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು. ಅಚ್ಚರಿಯಾದರೂ ಇದು ಸತ್ಯ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನ. 16 ಮತ್ತು 17ರಂದು ಹಲ್ಮಿಡಿ ಮತ್ತು ಬೇಲೂರು ಪಟ್ಟಣದಲ್ಲಿ ‘ಹಲ್ಮಿಡಿ ಉತ್ಸವ’ ನಡೆಸುತ್ತಿದೆ. ಇದಕ್ಕೆ ತಾಲ್ಲೂಕಿನ ಸದಸ್ಯರನ್ನು ಆಹ್ವಾನಿಸುವ ಸಲುವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸದಸ್ಯರಿಗೆ ಅಂಚೆ ಕಾರ್ಡ್ ಬರೆದಿದೆ. ಈ ಪತ್ರದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ಇದಕ್ಕೆ ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿ ಮಹೇಶ್ ಸಹಿ ಮಾಡಿದ್ದಾರೆ.
ಸಾಹಿತ್ಯ ಪರಿಷತ್ತು ಬರೆದ ಪತ್ರದಲ್ಲಿಯೇ ಇಷ್ಟೊಂದು ತಪ್ಪುಗಳು ಇರುವುದನ್ನು ನೋಡಿದರೆ ಕನ್ನಡದ ಸ್ಥಿತಿಯನ್ನು ನೆನೆದು ಕಣ್ಣೀರಿಡುವಂತಾಗಿದೆ. ಕನ್ನಡದ ತವರು ನೆಲದಲ್ಲಿ ಕನ್ನಡಮ್ಮನ ಈ ಗತಿ ನೆನೆದು ಅಯ್ಯೋ ಎನ್ನುವಂತಾಗಿದೆ. ಯಾವುದೋ ಸಂಘ–ಸಂಸ್ಥೆ ಈ ರೀತಿ ತಪ್ಪುಗಳನ್ನು ಬರೆದಿದ್ದರೆ, ಕ್ಷಮಿಸಬಹುದಿತ್ತೇನೋ. ಆದರೆ, ಕನ್ನಡಿಗರ ಮಾತೃಸಂಸ್ಥೆಯಾದ ಸಾಹಿತ್ಯ ಪರಿಷತ್ತು ಈ ರೀತಿ ತಪ್ಪುಗಳನ್ನು ಬರೆದರೆ ಕ್ಷಮಿಸಲು ಸಾಧ್ಯವೇ? ಸಾಹಿತ್ಯ ಪರಿಷತ್ತೇ ಕನ್ನಡಕ್ಕೆ ಈ ಸ್ಥಿತಿ ತಂದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ ಎಂದು ಮರುಗುತ್ತಾರೆ ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಕಸಾಪ ಸದಸ್ಯರೊಬ್ಬರು.