ಪಾಂಡವಪುರ: ನೇಪಾಳದ ಕಠ್ಮಂಡುನಲ್ಲಿ ಸಂಭವಿಸಿರುವ ಭೂಕಂಪದಲ್ಲಿ ತಾಲ್ಲೂಕಿನ ಹರಳಹಳ್ಳಿ ಗ್ರಾಮದ 33 ಮಂದಿ ಸಿಲುಕಿಕೊಂಡಿರುವ ಬಗ್ಗೆ ಸುದ್ದಿ ಹಬ್ಬಿದ್ದು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ತಾಲ್ಲೂಕಿನ ಹರಳಹಳ್ಳಿ ಗ್ರಾಮದ 31, ಕೆನ್ನಾಳು ಗ್ರಾಮದ ಒಬ್ಬರು ಮತ್ತು ಶ್ರೀರಂಗಪಟ್ಟಣದ ಒಬ್ಬರು ಒಟ್ಟು 33 ಮಂದಿ ಕಾಮಧೇನು ಟ್ರಾವೆಲ್ಸ್ ಮೂಲಕ ಏ. 9ರಂದು 23 ದಿನಗಳ ಕಾಲ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. ಇವರು ದೆಹಲಿ, ಮುಂಬೈ, ಹರಿದ್ವಾರ, ಬದರೀನಾಥ್, ಜಮ್ಮು– ಕಾಶ್ಮೀರ್ ಪ್ರವಾಸ ಮುಗಿಸಿಕೊಂಡು ಕಠ್ಮಂಡುಗೆ ತೆರಳಿದ್ದರು.
ಪ್ರವಾಸ ತಂಡದಲ್ಲಿದ್ದ ರಮೇಶ್ ಎಂಬುವರು ಅವರ ಸಹೋದರ ಕುಮಾರ್ ಅವರಿಗೆ ಶುಕ್ರವಾರ ಸಂಜೆ ದೂರವಾಣಿ ಕರೆ ಮಾಡಿ ಈ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ, ಆ ಬಳಿಕ ಅವರನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರವಾಸಿಗರ ತಂಡದಲ್ಲಿ ಹರಳಹಳ್ಳಿ ನಿವಾಸಿಗಳಾದ ಅಪ್ಪಾಜಿಗೌಡ, ಗೌರಮ್ಮ, ಶಿವಣ್ಣ, ದೇವಮ್ಮ, ಪದ್ಮಮ್ಮ, ಸಿದ್ದಪ್ಪ, ಮಂಜುಳಮ್ಮ, ಕಮಲಮ್ಮ, ಸುಶೀಲಮ್ಮ, ಬಲರಾಮು, ಶಂಕರಮ್ಮ, ಸುಬ್ಬಮ್ಮ, ಮಂಜುಳಾ, ಅನುಸೂಯಾ, ಪ್ರೇಮಮ್ಮ, ಯಶೋದಾ, ಮಂಜುಳಾ, ಸಬ್ಕಾಚಾರ್, ಮಂಜುನಾಥ್, ನಾರಾಯಣ, ಕೃಷ್ಣೇಗೌಡ, ತಾಯಮ್ಮ, ಹಾದನೋರಕ್ಕ, ಲಕ್ಷ್ಮಣ, ಮಂಗಳಾ, ಮಹದೇವಣ್ಣ, ಯಶೋದರಾ, ರಮೇಶ್, ಬೆಟ್ಟಸ್ವಾಮಿ ಹಾಗೂ ಶ್ರೀರಂಗಪಟ್ಟಣ ನಿವಾಸಿಯಾದ ಭಾಗ್ಯಮ್ಮ, ಕೆನ್ನಾಳು ನಿವಾಸಿಯಾದ ಕೆಂಪೇಗೌಡ ಅವರು ಸೇರಿದ್ದಾರೆ ಎನ್ನಲಾಗಿದೆ.