ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ನಿವಾಸದತ್ತ ಶನಿವಾರ ತಡರಾತ್ರಿ ಸಾಗಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ ಸಂದರ್ಭದಲ್ಲಿ ಮೂವರು ಮೃತಪಟ್ಟಿದ್ದು ಸುಮಾರು 500 ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನ್ ತೆಹರಿಕ್ ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್ ಖಾದ್ರಿ ಅವರ ನೇತೃತ್ವದಲ್ಲಿ ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ, ಭಾನುವಾರ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಅವರು ಆಂತರಿಕ ಭದ್ರತೆಯ ಬಗ್ಗೆ ಚರ್ಚಿಸಲು ಕಮಾಂಡರ್ಗಳ ಸಭೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ರಾತ್ರಿಯಿಡೀ ನಡೆದ ಘರ್ಷಣೆಯು ಬೆಳಿಗ್ಗೆ ನಿಯಂತ್ರಣಕ್ಕೆ ಬಂದರೂ ಉದ್ವಿಗ್ನ ಸ್ಥಿತಿ ಮುಂದುವರಿದಿದೆ. ಇಡೀ ದೇಶದಲ್ಲಿ ಅನಿಶ್ಚಿತ ವಾತಾವರಣ ನಿರ್ಮಾಣ ವಾಗಿದೆ. ಸಂಸತ್ ಭವನದ ಎದುರು ನಡೆಯುತ್ತಿರುವ ಧರಣಿಯನ್ನು ನವಾಜ್ ಷರೀಫ್ ಮನೆ ಮುಂದೆ ನಡೆಸಬೇಕು ಎಂದು ಮುಖಂಡರು ಶನಿವಾರ ತಡ ರಾತ್ರಿ ನಿರ್ಧರಿಸಿದ ಕೂಡಲೇ ಪೊಲೀಸರು ಮೆರವಣಿಗೆ ತಡೆಯಲು ಪ್ರಯತ್ನಿಸಿದರು. ಆಗ ಭಾರಿ ಘರ್ಷಣೆ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರಲ್ಲದೆ ರಬ್ಬರ್ ಗುಂಡು ಹಾರಿಸಿದರು.
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ 18 ದಿನಗಳಿಂದ ಧರಣಿ ನಡೆಸಿದರೂ ಪ್ರಯೋಜನ ವಾಗದಿದ್ದರಿಂದ ಒತ್ತಡ ತಂತ್ರವಾಗಿ ಖಾನ್ ಮತ್ತು ಖಾದ್ರಿ ಅವರು ತಮ್ಮ ಬೆಂಬಲಿಗರಿಗೆ ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಪ್ರಧಾನಿ ಅವರ ನಿವಾಸದ ಸುತ್ತ ಮತ್ತು ಸಂಸತ್ ಭವನದೊಳಗೆ ನುಗ್ಗಲು ಯತ್ನಿಸಿದವರನ್ನು ತಡೆಯಲು ರಬ್ಬರ್ ಗುಂಡು ಬಳಸಲಾಯಿತು ಮತ್ತು ಅಶ್ರುವಾಯು ಷೆಲ್ ಸಿಡಿಸಲಾಯಿತು.
ಘರ್ಷಣೆಯಲ್ಲಿ ಸುಮಾರು 80 ಪೊಲೀಸರು ಗಾಯಗೊಂಡಿದ್ದಾರೆ. ಗಾಯಗೊಂಡ ಸುಮಾರು 450 ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಮೂವರು ಸತ್ತಿರುವುದನ್ನು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಚುನಾವಣೆಯಲ್ಲಿ ಅಕ್ರಮವೆಸಗಿ ಆಯ್ಕೆಯಾಗಿರುವ ಷರೀಫ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಖಾನ್ ಮತ್ತು ಖಾದ್ರಿ ತಿಳಿಸಿದ್ದಾರೆ.
ಷರೀಫ್ ಸ್ಥಳಾಂತರ: ಗಲಭೆಯ ಹಿನ್ನೆಲೆಯಲ್ಲಿ ಷರೀಫ್ ಅವರು ವಾಸವನ್ನು ಇಸ್ಲಾಮಾಬಾದ್ನಿಂದ ಲಾಹೋರ್ನ ನಿವಾಸಕ್ಕೆ ಸ್ಥಳಾಂತರಿಸಿದ್ದಾರೆ. ಪ್ರತಿಭಟನಾಕಾ-ರರನ್ನು ತೆರವುಗೊಳಿಸಿ ಪರಿಸ್ಥಿತಿ ಶಾಂತವಾಗುವವರೆಗೂ ಇಸ್ಲಾಮಾಬಾದ್ ನಿವಾಸಕ್ಕೆ ಬರದಿರಲು ಷರೀಫ್ ನಿರ್ಧರಿಸಿದ್ದಾರೆ.
ಅಧ್ಯಕ್ಷ ಹಾಷ್ಮಿ ಉಚ್ಚಾಟನೆ
ಪ್ರತಿಭಟನೆ ನಡೆಸುವ ಬಗ್ಗೆ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಕ್ಷದ ಅಧ್ಯಕ್ಷ ಜಾವೇದ್ ಹಾಷ್ಮಿ ನಡುವೆ ಭಿನ್ನಮತ ಕಾಣಿಸಿದ್ದು ಹಾಷ್ಮಿ ಪಕ್ಷದಿಂದ ಉಚ್ಚಾಟಿಸಲಾಗಿದೆ.ಇವರೊಂದಿಗೆ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಯತ್ನಿಸಿದ ಪಕ್ಷದ ಮೂವರು ಸಂಸದರನ್ನು ಸಹ ಉಚ್ಚಾಟನೆ ಮಾಡಲಾಗಿದೆ.
ಸಂಸತ್ತಿನ ಜಂಟಿ ಅಧಿವೇಶನ
ದೇಶ ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಸಂಸತ್ತಿನ ಜಂಟಿ ಅಧಿವೇಶನ ನಡೆಸಲು ಪ್ರಧಾನಿ ನವಾಜ್ ಷರೀಫ್ ನಿರ್ಧರಿಸಿದ್ದಾರೆ.
ಟಿವಿ ಕಚೇರಿ ಮೇಲೆ ದಾಳಿ
ಪಿಟಿಐ ಪಕ್ಷದ ಪ್ರತಿಭಟನಾಕಾರರು ಜಿಯೊ ಸುದ್ದಿ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಕಲ್ಲು, ಕೋಲುಗಳಿಂದ ದಾಳಿ ನಡೆಸಲಾಗಿದ್ದು, ವಾಹನಗಳು ಜಖಂಗೊಂಡಿವೆ. ಆದರೆ, ಪತ್ರಕರ್ತರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.