ಕೈಮಗ್ಗದ ವಸ್ತ್ರದಲ್ಲಿ ಎರಡು ವಿಧ. ಮಗ್ಗಕ್ಕೆ ಬಳಸುವ ನೂಲು ಕೈಯಿಂದಲೇ ಸಿದ್ಧವಾದರೆ ಅದನ್ನು ಖಾದಿವಸ್ತ್ರ ಎನ್ನುತ್ತಾರೆ. ನೂಲು ಸ್ವಯಂಚಾಲಿತ ಯಂತ್ರದಿಂದ, ಅರ್ಥಾತ್ ಸ್ಪಿನ್ನಿಂಗ್ ಮಿಲ್ಲುಗಳಿಂದ ಬಂದರೆ ಅಂತಹ ವಸ್ತ್ರವನ್ನು ಕೈಮಗ್ಗವಸ್ತ್ರ ಎನ್ನುತ್ತಾರೆ. ಸಹಜವಾಗಿಯೇ ಕೈಮಗ್ಗದ ವಸ್ತ್ರಗಳಲ್ಲಿ ಖಾದಿವಸ್ತ್ರ ಶ್ರೇಷ್ಠವಾದದ್ದು.
ಕಳೆದ ಕೆಲವು ದಿನಗಳಿಂದ ಖಾದಿವಸ್ತ್ರವು ಮತ್ತೊಮ್ಮೆ ಪ್ರಾಧಾನ್ಯ ಪಡೆದಿದೆ. ದೇಶದ ಪ್ರಧಾನಿಯವರು, ಕಾಂಗ್ರೆಸ್ಸಿಗರಲ್ಲದ ಪ್ರಧಾನಿಯವರು, ಗಾಂಧೀಜಿಯವರ ಕಡುವಿರೋಧಿಯಾಗಿದ್ದ ಆರ್ಎಸ್ಎಸ್ನಿಂದ ಬಂದ ಪ್ರಧಾನಿಯವರು, ದೇಶದ ಜನರಿಗೆ ‘ಗಾಂಧಿ ವಸ್ತ್ರ ತೊಡಿರಿ’ ಎಂದು ತಾಕೀತು ಮಾಡತೊಡಗಿದ್ದಾರೆ. ದೇಶದ ಪ್ರಧಾನಿಯೊಬ್ಬರು ‘ಖಾದಿ ತೊಡಿರಿ’ ಎಂದು ತಾಕೀತು ಮಾಡಿದರೆ, ಅವರು ಯಾವುದೇ ಪಕ್ಷಕ್ಕೆ ಸೇರಿರಲಿ, ನಾನದನ್ನು ಸ್ವಾಗತಿಸಬಯಸುತ್ತೇನೆ. ಮಾತ್ರವಲ್ಲ, ತಮ್ಮ ಮಾತನ್ನು ‘ಕಾರ್ಯರೂಪಕ್ಕೆ ತನ್ನಿ’ ಅಂತ ಪ್ರಧಾನಿಯವರನ್ನು ಆಗ್ರಹಿಸಲು ಬಯಸುತ್ತೇನೆ.
ಏಕೆಂದರೆ ವಸ್ತುಸ್ಥಿತಿ ಸರಳವಿಲ್ಲ. ದೇಶದ ಜನರೆಲ್ಲ ತೊಡುವುದಿರಲಿ, ದೇಶದ ಅರ್ಧಪ್ರತಿಶತ ಭಾರತೀಯರು ತೊಡಲು ಪ್ರತಿಜ್ಞೆ ಮಾಡಿದರೂ ಅವರಿಗೆ ಒದಗಿಸಲಿಕ್ಕೆ ಖಾದಿ ವಸ್ತ್ರ ನಮ್ಮಲ್ಲಿಲ್ಲ. ಖಾದಿಯಂತೆ ಕಾಣುವ ವಸ್ತ್ರವಿದೆ, ಖಾದಿ ಇಲ್ಲ. ದೇಶದ ಪ್ರಧಾನಿಯವರಿಗೆ ಪರಿಸ್ಥಿತಿಯ ಅರಿವಿಲ್ಲವೇ? ಖಾದಿಬಟ್ಟೆಯ ಉತ್ಪಾದನೆಯ ಜವಾಬ್ದಾರಿ ಹೊತ್ತ ಒಂದು ಸಮಗ್ರ ಇಲಾಖೆಯೇ ಅವರ ಅಧೀನದಲ್ಲಿದೆ.
ಖಾದಿ ಉಳಿಯಬೇಕೆಂದರೆ ಮೊದಲನೆಯದಾಗಿ, ಖಾದಿಯಂತೆ ಕಾಣುವ ಕಳ್ಳವಸ್ತ್ರದ ಉತ್ಪಾದನೆಯನ್ನು ಅವರು ಪ್ರತಿಬಂಧಿಸಬೇಕು. ಎರಡನೆಯದಾಗಿ, ಈ ದೇಶದ ಉದ್ದಗಲಕ್ಕೆ ಹರಡಿರುವ ಲಕ್ಷಾಂತರ ಗ್ರಾಮಗಳ ಕೋಟ್ಯಂತರ ಬಡಮಹಿಳೆಯರು (ಹಾಗೂ ಪುರುಷರು) ತಮ್ಮ ಬಿಡುವಿನ ವೇಳೆಯಲ್ಲಿ ಹತ್ತಿನೂಲು ನೂಲುವಂತೆ ಅವರು ಉತ್ತೇಜಿಸಬೇಕು. ಅರ್ಥಾತ್ ನೂಲುವ ರಾಷ್ಟ್ರೀಯ ಆಂದೋಲನವೊಂದಕ್ಕೆ ಚಾಲನೆ ನೀಡಬೇಕು. ಗ್ರಾಮೀಣಾಭಿವೃದ್ಧಿಯ ಅಂತಹ ವಾತಾವರಣವಾಗಲೀ, ಅಥವಾ ವಾತಾವರಣ ನಿರ್ಮಾಣ ಮಾಡುವ ರಾಜಕೀಯ ಇಚ್ಛಾಶಕ್ತಿಯಾಗಲೀ ನಮ್ಮಲ್ಲಿ ಕಾಣಿಸುತ್ತಿಲ್ಲ. ಹಾಗೆಂದೇ ಅನೇಕರಿಗೆ ಪ್ರಧಾನಮಂತ್ರಿಗಳ ಹೇಳಿಕೆಯು ಕೇವಲ ರಾಜಕೀಯ ದಿಂಡುರುಳಿಕೆಯಾಗಿ ಕಾಣಿಸುತ್ತಿರುವುದು.
ಏನಿದು ರಾಜಕೀಯ? ಗಾಂಧೀಜಿ ಹಾಗೂ ಖಾದಿವಸ್ತ್ರ ಈವರೆಗೆ ಕಾಂಗ್ರೆಸ್ಸಿನ ಸ್ವತ್ತಾಗಿತ್ತು. ಕಾಂಗ್ರೆಸ್ ಮೂರ್ಖತನ ಮಾಡಿತು.
ಜವಾಹರಲಾಲ್ ನೆಹರೂ ಯುಗದಲ್ಲಿ ಅರ್ಧಭಾಗ ಹಾಗೂ ಪಿ.ವಿ. ನರಸಿಂಹರಾಯರ ನಂತರದ ಯುಗದಲ್ಲಿ ಉಳಿದರ್ಧಭಾಗ, ಗಾಂಧಿ ಲಾಂಛನವನ್ನು ಕೈಚೆಲ್ಲಿ ಹಾಕಿತು. ಕಾಂಗ್ರೆಸ್ ಪ್ರಧಾನಮಂತ್ರಿ ಅಥವಾ ಕಾಂಗ್ರೆಸ್ ಪಕ್ಷಾಧ್ಯಕ್ಷರಿಗೆ ಗಾಂಧಿ ಎಂಬ ಹೆಸರು ಅಂಟಿಕೊಂಡಿದ್ದರೆ ಸಾಕು ಗಾಂಧೀಗಿರಿ ತಮ್ಮೊಡನೆ ಉಳಿದುಬಿಡುತ್ತದೆ ಎಂಬ ಹುಂಬಧೈರ್ಯ ತಾಳಿತು ಕಾಂಗ್ರೆಸ್ ಪಕ್ಷ. ಹಾಗಾಗಲಿಲ್ಲ. ಈಗ, ಚಾಣಾಕ್ಷ ನರೇಂದ್ರ ಮೋದಿಯವರು ಕಾಂಗ್ರೆಸ್ಸಿನಿಂದ ಗಾಂಧಿಲಾಂಛನವನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಮೋದಿಯವರು ಸಂಕೇತಕ್ಕೆ ಮಾತ್ರವೇ ಕೈ ಹಚ್ಚಿದ್ದಾರೆಯೇ ಅಥವಾ ಗ್ರಾಮೀಣಾಭಿವೃದ್ಧಿಯ ಮಹಾನ್ವ್ರತ ಕೈಗೊಂಡಿದ್ದಾರೆಯೇ ಎಂಬ ಸಂಗತಿಯನ್ನು ಸಮಯವೇ ನಿರ್ಧರಿಸಬೇಕು. ನಾವು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ದಿಂಡುರುಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ನೂಲುವ ಹೆಂಗಸರ ದಾರುಣ ಪರಿಸ್ಥಿತಿಯತ್ತ ಗಮನ ಹರಿಸುವುದು ಒಳ್ಳೆಯದು.
ಯಾರಿವರು ನೂಲುವ ಹೆಂಗಸರು? ಎಲ್ಲಿದ್ದಾರೆ ಇವರು? ಯಾರು ಕಂಡಿದ್ದಾರೆ ಇವರನ್ನು? ಕರ್ನಾಟಕದಲ್ಲಿ ಹತ್ತಿ ನೂಲುವಿಕೆ ಈಗಲೂ ಜೀವಂತವಿದೆಯೆ? ಇದೆ, ಆದರೆ, ‘ದಿ ಗ್ರೇಟ್ ಇಂಡಿಯನ್ ಬಸ್ಟರ್’ ಎಂಬ ಹೆಸರಿನ ಅಳಿವಿನಂಚಿಗೆ ಸರಿದ ಪ್ರಖ್ಯಾತ ಹಕ್ಕಿಯಂತೆ ಅದು ಬದುಕುಳಿದಿದೆ. ದಿ ಗ್ರೇಟ್ ಇಂಡಿಯನ್ ಬಸ್ಟರ್ ಹಕ್ಕಿಗೆ ಅಭಯಾರಣ್ಯವಾದರೂ ಸಿಕ್ಕಿದೆ, ನೂಲುವ ಹೆಂಗಸರಿಗೆ ಅಭಯವೂ ಇಲ್ಲ ಅರಣ್ಯವೂ ಇಲ್ಲ. ಅವರಿಗಿರುವುದೇನಿದ್ದರೂ ಅರಣ್ಯರೋದನ ಮಾತ್ರ.
ಹತ್ತಿನೂಲುವಿಕೆ ನಡೆದಿರುವ ಕರ್ನಾಟಕದ ಹಲಕೆಲವು ಕೇಂದ್ರಗಳಲ್ಲಿ, ಎರಡು ಕೇಂದ್ರಗಳನ್ನು ಇಲ್ಲಿ ಉದಾಹರಣೆಯಾಗಿ ಕೈಗೆತ್ತಿಕೊಳ್ಳಲು ಬಯಸುತ್ತೇನೆ. ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರ ಹಾಗೂ ವಿಜಾಪುರ (ಈಗ ವಿಜಯಪುರ) ಜಿಲ್ಲೆಯ ಕಳಕಾಪುರ ಗ್ರಾಮದ ಖಾದಿ ಕೇಂದ್ರಗಳನ್ನಷ್ಟೆ ಮುಂದಿಟ್ಟುಕೊಂಡು ಚರ್ಚಿಸಲು ಬಯಸುತ್ತೇನೆ. ಬದನವಾಳಿನ ಖಾದಿ ಕೇಂದ್ರವನ್ನು ಸ್ಥಾಪಿಸಿದವರು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರು. ಇದನ್ನವರು ಕಳೆದ ಶತಮಾನದ ಆರಂಭದಲ್ಲಿಯೇ ಮಾಡಿದರು. ೧೯೨೧ರಲ್ಲಿ ಗಾಂಧೀಜಿ ಈ ಆಶ್ರಮಕ್ಕೆ ಭೇಟಿ ನೀಡಿ ಕೆಲಕಾಲ ನಿಂತು ಕಾರ್ಯಕರ್ತರನ್ನು ಹುರಿದುಂಬಿಸಿ ಹೋಗಿದ್ದರು.
ಹಿಂದೊಮ್ಮೆ ಬದನವಾಳಿನ ಖಾದಿವಸ್ತ್ರ ಹಳೆಮೈಸೂರು ಪ್ರದೇಶದಲ್ಲಿ ಹೆಸರಾಂತ ವಸ್ತ್ರವಾಗಿತ್ತು. ದಿವಂಗತ ಕಿ.ರಂ. ನಾಗರಾಜ್ ಅವರು ನನಗೊಮ್ಮೆ ಒಂದು ಸ್ವಾರಸ್ಯಕರ ಕತೆ ಹೇಳಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗ ‘ಎಂಡ್ಕುಡ್ಕ್ ರತ್ನ’ ಖ್ಯಾತಿಯ ಹಿರಿಯ ವಿದ್ವಾಂಸ ಜಿ.ಪಿ. ರಾಜರತ್ನಂ ಅವರ ಗುರುಗಳಂತೆ. ರಾಜರತ್ನಂ ಅವರು ದಿನವೂ ಕ್ಲಾಸಿಗೆ ತುಂಬ ಸುಂದರವಾದ ಬಟ್ಟೆ ತೊಟ್ಟು ಬರುತ್ತಿದ್ದರಂತೆ. ಧೀರಗಂಭೀರ ನಿಲುವಿನ ರಾಜರತ್ನಂ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದ ದಪ್ಪದಡಿಯಂತಹ ವಸ್ತ್ರದಿಂದ ಮಾಡಿದ ಜುಬ್ಬಾ ಹಾಗೂ ಪಂಚೆಗಳ ಸೌಂದರ್ಯಕ್ಕೆ ಮಣಿದ ಕಿರಂ, ಒಮ್ಮೆ ಧೈರ್ಯಮಾಡಿ ಗುರುಗಳನ್ನು ಕೇಳಿದ್ದರಂತೆ, ‘ಗುರುಗಳೇ ನಿಮ್ಮೀ ಬಟ್ಟೆ ಎಲ್ಲಿಯದು’ ಎಂದು. ರಾಜರತ್ನಂ ಅರೆಹಾಸ್ಯ ಬೆರೆತ ದನಿಯಲ್ಲಿ ಶಿಷ್ಯನನ್ನು ಗದರಿಸಿ, ‘ಏನಯ್ಯ! ಇಷ್ಟೂ ತಿಳಿಯದೆ ನಿನಗೆ. ಇದು ಬದನವಾಳಿನ ಖಾದಿ ಕಣಯ್ಯ!’ ಅಂದಿದ್ದರಂತೆ.
ಅಂತಹ ಪ್ರಖ್ಯಾತ ಖಾದಿವಸ್ತ್ರದ ನೇಯ್ಗೆಗೆ ಕಾರಣವಾದ ನೂಲುಸುತ್ತುವ ಹೆಂಗಸರು ಇಂದು ತೀವ್ರ ಸಂಕಷ್ಟದಲ್ಲಿದ್ದಾರೆ. ಹೆಚ್ಚಿನವರು
ನೂಲುವಿಕೆ ತೊರೆದಿದ್ದಾರೆ. ಕೆಲವರು ಉಳಿದಿ-ದ್ದಾರೆ. ಮುದುಕಿಯರಾಗಿದ್ದಾರೆ, ಹಲವು ಏರಿಳಿತಗಳನ್ನು ಕಂಡಿದ್ದಾರೆ. ಆದರೂ ಉಳಿದಿದ್ದಾರೆ. ಕೆಲವರ್ಷಗಳ ಹಿಂದೆ ಬದನವಾಳಿನಲ್ಲಿ ನಡೆದ ದಲಿತರ ಭೀಕರ ಹತ್ಯಾಕಾಂಡ ಕಂಡಿದ್ದಾರೆ ಅವರು. ಹತ್ಯಾಕಾಂಡದ ನಂತರ ಜೈಲಿಗೆ ತೆರಳಿದ ತಪ್ಪಿತಸ್ಥರ ಮನೆಯ ಹೆಂಗಸರ ದುಃಖವನ್ನೂ ಕಂಡಿದ್ದಾರೆ. ಖಾದಿ ಕೇಂದ್ರದಲ್ಲಿ ದಲಿತರೂ ಇದ್ದಾರೆ, ಮೇಲ್ಜಾತಿಗಳವರೂ ಇದ್ದಾರೆ. ಎಲ್ಲರೂ ಬಡವರೇ. ನೂಲುವುದರಿಂದ ಅವರಿಗೆ ಬರುವ ದೈನಂದಿನ ಸರಾಸರಿ ದುಡಿಮೆ ಐವತ್ತರಿಂದ ಅರವತ್ತು ರೂಪಾಯಿ ಇದ್ದದ್ದು, ಇತ್ತೀಚೆಗೆ ಜಾರಿಯಾದ ಪರಿಷ್ಕೃತ ದರದ ಪರಿಣಾಮವಾಗಿ, ನೂರು ನೂರಾ ಇಪ್ಪತ್ತಕ್ಕೆ ಏರಿದೆ. ಅವರು ಹೇಳುವುದಿಷ್ಟೆ, ‘ಸ್ವಾಮಿ! ನಮಗೆ ವಯಸ್ಸಾಯಿತು. ಮತ್ತ್ಯಾವುದೇ ಹೊಸ ವೃತ್ತಿ ಕಲಿಯಲಾರೆವು ನಾವು. ಸರಿಯಾದ ಸಮಯಕ್ಕೆ ಹಂಜಿ ಸಿಕ್ಕುವಂತೆ ಏರ್ಪಾಡು ಮಾಡಿ ಸಾಕು’ ಎಂದು. ಪ್ರಧಾನಮಂತ್ರಿಗಳು ಮಾಡಬೇಕಾದ ಕೆಲಸವಿದು. ಸರಿಯಾದ ಸಮಯಕ್ಕೆ ಹಂಜಿಯ ವ್ಯವಸ್ಥೆ ಮಾಡಿ, ಸೂಕ್ತ ದರ ನಿಗದಿ ಮಾಡಿದರೆ, ದೇಶದ ಬಡವರೆಲ್ಲ ನೂಲು ಸುತ್ತುವ ಕಾಯಕಕ್ಕೆ ಮರಳಿಯಾರು. ನೂಲು ಸುತ್ತುವ ಕಾಯಕ ಮನೆಯ ಕಾಯಕ, ಕೃಷಿಗೆ ಪೂರಕವಾಗಬಲ್ಲ ಉಪವೃತ್ತಿ, ಹೆಂಗಸರಿಗೆ ಹೇಳಿ ಮಾಡಿಸಿದ ಕಾಯಕ.
ಬದನವಾಳು ಖಾದಿ ಕೇಂದ್ರ ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲುಮಾರ್ಗದಲ್ಲಿ ನರಸಾಂಬುಧಿ ನಿಲ್ದಾಣದ ಬದಿಯಲ್ಲಿದೆ. ಪಾಳು ಬಿದ್ದಿದೆ. ಆದರೆ ಸುಂದರವಾಗಿದೆ, ಪವಿತ್ರವಾಗಿದೆ. ನೀವಲ್ಲಿಗೆ ಹೋದರೆ, ಕಳ್ಳ ಸನ್ಯಾಸಿಗಳ ಭವ್ಯಆಶ್ರಮಗಳಲ್ಲಿ ಸಿಕ್ಕಲಾರದ ಮನಶಾಂತಿ ಅಲ್ಲಿ ನಿಮಗೆ ಸಿಕ್ಕೀತು. ಯಾರಿಗಾದರೂ ನಮಸ್ಕರಿಸಬೇಕು, ಅಹಂಕಾರ ಕಳೆದುಕೊಳ್ಳಬೇಕು ಎಂದು ನಿಮಗನ್ನಿಸಿದರೆ, ನೂಲು ಸುತ್ತುವ ಈ ಬಡಹೆಂಗಸರಿಗೆ ನಮಸ್ಕರಿಸಿ ಬನ್ನಿ. ನಿಮಗೆ ಒಳ್ಳೆಯದಾದೀತು.
ಕಂಕಣಕೊಪ್ಪ ಬಾಗಲಕೋಟೆ ಜಿಲ್ಲೆಯಲ್ಲಿ, ಬಾಗಲಕೋಟೆ ಊರಿನಿಂದ ಕೇವಲ ಹತ್ತಿಪ್ಪತ್ತು ಕಿಲೋಮೀಟರುಗಳ ಅಂತರದಲ್ಲಿದೆ. ಇಲ್ಲಿಯೂ ಬಡಮಹಿಳೆಯರು ಖಾದಿ ನೂಲು ಸುತ್ತುತ್ತಾರೆ. ವಿಜಯಪುರ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಸಂಘ ಈ ಕೇಂದ್ರವನ್ನು ನಡೆಸುತ್ತಿದೆ. ಕಂಕಣಕೊಪ್ಪದ ಹೆಂಗಸರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಇಲ್ಲಿ ಆಶ್ರಮವಿಲ್ಲ, ಸ್ವಚ್ಛ ವಾತಾವರಣವಿಲ್ಲ. ಕಂಕಣಕೊಪ್ಪ ಒಂದು ಕುಗ್ರಾಮ. ಈ ಮಹಿಳೆಯರು ಸುತ್ತುವುದು ಕೊಂಚ ದಪ್ಪನೆಯ ನೂಲು. ಈ ನೂಲಿನಿಂದ ಜಮಖಾನೆ ನೇಯಲಾಗುತ್ತದೆ. ಕಂಕಣಕೊಪ್ಪ ಹಾಗೂ ಬದನವಾಳು, ಈ ದೇಶದ ಗ್ರಾಮೀಣ ಪರಿಸ್ಥಿತಿಯ ಪ್ರಾತಿನಿಧಿಕ ಉದಾಹರಣೆಗಳು ಎಂದೇ ನಾನು ತಿಳಿಯುತ್ತೇನೆ. ಗ್ರಾಮೀಣ ಪ್ರದೇಶದ ಕೋಟ್ಯಂತರ ದುಡಿಯುವ ಕೈಗಳು, ಕೃಷಿಗೆ ಪೂರಕವಾಗಬಲ್ಲ ಗೃಹಕೈಗಾರಿಕೆಯೊಂದಕ್ಕಾಗಿ ಹಾತೊರೆದು ಕುಳಿತಿವೆ. ವರ್ಷದಲ್ಲಿ ಕೇವಲ ಆರು ತಿಂಗಳ ಆದಾಯ ತರುವ ಕೃಷಿಯು ಬಡವರ ಹಸಿವನ್ನು ಸಂಪೂರ್ಣವಾಗಿ ಇಂಗಿಸಲಾರದು. ಹಾಗಂತ ಅವರು ಕಾರ್ಖಾನೆಗಳಲ್ಲಿ ಕೆಲಸಕ್ಕೆ ಹೋಗಲಾರರು. ಆದರೆ ನಾವು ಬಲವಂತದ ಕೈಗಾರಿಕೀಕರಣ ನಡೆಸಿದ್ದೇವೆ. ಬಡವರನ್ನು ಗುಳೆ ಎಬ್ಬಿಸ ಹೊರಟಿದ್ದೇವೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿವಿಧ ಸರ್ಕಾರಗಳು ಗ್ರಾಮೀಣಾಭಿವೃದ್ಧಿಯ ಕೆಲಸವನ್ನು ಮಾಡಿಯೇ ಇಲ್ಲ ಎಂದು ಹೇಳಿದರೆ ಅಪ್ರಾಮಾಣಿಕ ಹೇಳಿಕೆಯಾದೀತು. ಎಲ್ಲ ಸರ್ಕಾರಗಳೂ ಗ್ರಾಮೀಣಾಭಿವೃದ್ಧಿಗೆಂದು ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿವರ್ಷ ಸುರಿಯುತ್ತ ಬಂದಿವೆ. ಸಾಕಷ್ಟು ಶ್ರಮವನ್ನೂ ಹಾಕಿವೆ. ಆದರೆ ಸೋತಿವೆ. ಕೊಂಚ ಹೆಚ್ಚು, ಕೊಂಚ ಕಡಿಮೆ, ಆದರೆ ಸೋತಿವೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಸೋಲಿಗೆ ಏನು ಕಾರಣವಿದ್ದೀತು?
ಗ್ರಾಮೀಣಾಭಿವೃದ್ಧಿಯಲ್ಲಿ ಎರಡು ಪ್ರಮುಖ ಮಾದರಿಗಳಿವೆ. ಅವುಗಳನ್ನು ನಾನು, ಗಾಂಧಿ ಮಾದರಿ, ಮಾವೊತ್ಸೆತುಂಗನ ಮಾದರಿ ಎಂದು ಕರೆಯಲಿಚ್ಛಿಸುತ್ತೇನೆ. ಇತರೆ ಮಾದರಿಗಳೂ ಇವೆ. ಜಪಾನಿನ ಸಹಜ ಕೃಷಿಯ ಹರಿಕಾರ ಫುಕೊವೋಕಾನ ಮಾದರಿ, ಕ್ಯೂಬಾ ದೇಶದ ಇತ್ತೀಚಿನ ಪ್ರಯೋಗಗಳು... ಇತ್ಯಾದಿ. ಆದರೆ ಮೇಲೆ ಹೇಳಿದವು ಪ್ರಮುಖ ಮಾದರಿಗಳು. ಗಾಂಧಿಮಾದರಿ ಪಾರಂಪರಿಕ ಗ್ರಾಮೀಣ ಉದ್ದಿಮೆಗಳನ್ನು ಒಪ್ಪಿಕೊಂಡ ಮಾದರಿ. ಪಾರಂಪರಿಕ ಉದ್ದಿಮೆ ಹಾಗೂ ವೈಚಾರಿಕತೆಯನ್ನು ಬೆರೆಸಿ ಬದಲಾವಣೆ ತರಲು ಹೊರಟಿತು ಗಾಂಧಿ ಮಾದರಿ. ಮಾವೊತ್ಸೆತುಂಗನ ಮಾದರಿ ಪಾರಂಪರಿಕ ಉದ್ದಿಮೆಗಳನ್ನು ತಿರಸ್ಕರಿಸಿತು. ಕುಶಲಕಲೆಗಳು, ಕೈಮಗ್ಗ, ಪಾರಂಪರಿಕ ಕೃಷಿ, ಪಾರಂಪರಿಕ ಹೈನುಗಾರಿಕೆ... ಇವುಗಳನ್ನು ತಿರಸ್ಕರಿಸಿತು. ಮಾವೊ ಮಾದರಿಯು ವಿಚಾರಕ್ರಾಂತಿ ಹಾಗೂ ಕೈಗಾರಿಕಾಕ್ರಾಂತಿ ಎರಡನ್ನೂ ಒಟ್ಟಾಗಿ ಗ್ರಾಮೀಣ ಪ್ರದೇಶದೊಳಗೆ ತರುವ ಪ್ರಯತ್ನ ಮಾಡಿತು.
ಮಾವೊತ್ಸೆತುಂಗನ ಮಹತ್ವವಿರುವುದು ಕೈಗಾರಿಕೀಕರಣವೆಂಬ ಪರಿಕಲ್ಪನೆಯನ್ನು ಗ್ರಾಮೀಣ ಪರಿಸರಕ್ಕೆ ಬಗ್ಗಿಸಿದ ರೀತಿಯಲ್ಲಿ. ಆತ ಬೃಹತ್ ಕೈಗಾರಿಕೆಗಳನ್ನು ಸಣ್ಣಸಣ್ಣ ಘಟಕಗಳನ್ನಾಗಿ ಒಡೆದು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ದ, ಕೊಂಚ ಬಲವಂತದಿಂದಲೇ ಕೊಂಡೊಯ್ದ. ಗ್ರಾಮೀಣ ಬಡವರ ಕೌಶಲವನ್ನು ರೂಪಾಂತರಿಸಿ, ಮಡಕೆ ಮಾಡುವ ಕೈಗಳಿಗೆ ಸಿಎಫ್ಎಲ್ ಬಲ್ಬುಗಳನ್ನು ಜೋಡಿಸುವ ತಂತ್ರ ಕಲಿಸಿದ, ಮಗ್ಗ ನೇಯುವ ಕೈಗಳಿಗೆ ವಿದ್ಯುತ್ ಮಗ್ಗ ನಡೆಸುವ ಕೆಲಸ ಕಲಿಸಿದ. ಹೀಗೆ ಮಾಡಿ ಚೀನಾ ದೇಶವು ಅಮೆರಿಕ, ಯೂರೋಪುಗಳು ಸಾಧಿಸಲಾಗದ ಆರ್ಥಿಕ ಪ್ರಗತಿಯನ್ನು ಸಾಧಿಸಿ ತೋರಿಸಿತು. ಕೇವಲ ಆರ್ಥಿಕ ಮಾನದಂಡದಿಂದ ನೋಡುವುದಾದರೆ ಮಾವೊತ್ಸೆತುಂಗನ ಮಾದರಿ ಯಶಸ್ವಿಮಾದರಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕೇವಲ ಆರ್ಥಿಕ ಮಾನದಂಡ ಸಮರ್ಥ ಮಾನದಂಡವಲ್ಲ. ಮಾವೊತ್ಸೆತುಂಗನ ಮಾದರಿ ಅಂತಿಮವಾಗಿ ಮನುಕುಲಕ್ಕೆ ದುಬಾರಿಯಾಗಬಲ್ಲ ಮಾದರಿ.
ನನಗೆ ಮಾವೊತ್ಸೆತುಂಗನ ಬಗ್ಗೆ ಗೌರವವಿದೆ. ಆದರೆ ಆತನ ಮಾದರಿಯನ್ನು ನಾನು ಒಪ್ಪಲಾರೆ. ಮನುಕುಲಕ್ಕೆ ಮಿಕ್ಕ ಜೀವಗಳಿಗೆ, ಸಸ್ಯಪ್ರಭೇದಗಳಿಗೆ ದುಬಾರಿಯಾಗಬಲ್ಲ ಮಾದರಿ ಚೀನಾ ಮಾದರಿ. ಮನುಷ್ಯ ಪರಸ್ಪರಾವಲಂಬಿ. ಆತನ ನೆಮ್ಮದಿಯು ಪರಿಸರದ ನೆಮ್ಮದಿಯೊಟ್ಟಿಗೆ ಬೆರೆತುಕೊಂಡಿದೆ. ಮನುಷ್ಯ ಸಹಕರಿಸಬೇಕೇ ಹೊರತು ಸಂಘರ್ಷಕ್ಕಿಳಿಯಬಾರದು.
ನಾವು ಭಾರತೀಯರು, ಇತ್ತ ಗಾಂಧಿಮಾದರಿಯನ್ನೂ ಜಾರಿಗೆ ತರಲಿಲ್ಲ, ಅತ್ತ ಮಾವೊತ್ಸೆತುಂಗನ ಮಾದರಿಯನ್ನೂ ಜಾರಿಗೆ ತರಲಿಲ್ಲ. ಎರಡರ ನಡುವೆ ಬಿದ್ದು ಒದ್ದಾಡುತ್ತಿದ್ದೇವೆ ನಾವು. ನಮ್ಮ ಗ್ರಾಮಗಳು ಅರೆಬರೆ ಕೈಗಾರಿಕೀಕರಣ, ಅರೆಬರೆ ಶ್ರೀಮಂತಿಕೆ, ಅರೆಬರೆ ಬಡತನ, ರೋಗರುಜಿನೆ, ಜಾತಿಪದ್ಧತಿ, ದೂಳು ದುಮ್ಮಾನಗಳಿಂದ ತುಂಬಿ ನರಳುತ್ತಿವೆ. ವಿಚಾರಕ್ರಾಂತಿ ನಮ್ಮ ಗ್ರಾಮಗಳನ್ನು ತಲುಪಲೇ ಇಲ್ಲ. ‘ನಿರಂಕುಶಮತಿಗಳಾಗಿ’ ಎಂದು ಭಾರತೀಯರಿಗೆ ಕರೆ ನೀಡಿದ ಕುವೆಂಪು, ಸಾವಿನಲ್ಲಿಯೂ ಸಹ ನೋವಿನಿಂದ ಮುಲುಕಾಡುತ್ತಿರಬಹುದೇ ಎಂದು ನನಗೆ ಅನುಮಾನವಿದೆ. ನಾವು ಜಾತಿವಾದಿಗಳಾದೆವು, ಲಾಭಬಡುಕರಾದೆವು, ಕ್ರೂರಿಗಳಾದೆವು, ನಿರಂಕುಶಮತಿಗಳಾಗಲಿಲ್ಲ.
ಪ್ರಧಾನಿ ಮೋದಿಯವರು ಗ್ರಾಮೀಣ ಉದ್ಯಮಶೀಲತೆಯನ್ನು ಪ್ರೇರೇಪಿಸಿಯಾರೆ? ಗ್ರಾಮೀಣ ಬಡವರನ್ನು ಭಿಕ್ಷುಕರನ್ನಾಗಿಸುವ ಬದಲು ಧೀರಗಂಭೀರ ನಾಗರಿಕರನ್ನಾಗಿಸಬಲ್ಲರೆ ಅವರು? ಸ್ವದೇಶಿ ಎಂದರೆ ಕೇವಲ ಹಿಂದುತ್ವವಲ್ಲ. ಖಾದಿಯೆಂಬುದು ಕೇವಲ ಉಡುಗೆಯಲ್ಲ. ನೂಲುಸುತ್ತುವ ಮಹಿಳೆಯರನ್ನು ರಾಷ್ಟ್ರೀಯ ಸ್ತರದಲ್ಲಿ ಜಾಗೃತಗೊಳಿಸಿಯಾರೆ ಅವರು? ದೇಶವೆಂಬುದೇ ಒಂದು ಅರಿವೆಯಿದ್ದಂತೆ. ದೇಶವೆಂಬ ಅರಿವೆಯಲ್ಲಿ ಲಕ್ಷಾಂತರ ನೂಲುಗಳು ಹಾಸು-ಹೊಕ್ಕಾಗಿ ಹೆಣೆದುಕೊಂಡಿರುತ್ತವೆ. ನೂಲು ತುಂಡಾಗಬಾರದು, ದ್ವೇಷಕ್ಕೆ ಅವಕಾಶವಾಗಬಾರದು. ಪ್ರೀತಿ ಹಾಗೂ ತಾಳ್ಮೆಯಿಂದ ದೇಶ ಕಟ್ಟಬೇಕು. ಹೌದು! ದೇಶ ಕಟ್ಟುವುದು ನೇಯ್ಗೆಯಷ್ಟೇ ಸೂಕ್ಷ್ಮ ಕೆಲಸ. ಪ್ರಧಾನಮಂತ್ರಿಗಳ ಮಾತನ್ನು ನಂಬಲು ಬಯಸುತ್ತೇನೆ ನಾನು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.