ಜಮ್ಮು (ಐಎಎನ್ಎಸ್): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದರು.
ತಮ್ಮ ಪುತ್ರ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಇಲ್ಲಿನ ಗುಜ್ಜಾರ್ ವಿದ್ಯಾರ್ಥಿ ನಿಲಯದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ತೆರಳಿ ಪ್ರವಾಹ ಪೀಡಿತರೊಂದಿಗೆ ಮಾತುಕತೆ ನಡೆಸಿದ ಅವರು, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಸಂಬಂಧ ಪಕ್ಷವು ಕೆಂದ್ರ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಅತ್ಯಾಚಾರ ಆರೋಪಿ ಆತ್ಮಹತ್ಯೆಗೆ ಯತ್ನ
ಕೊಟಾ/ರಾಜಸ್ತಾನ (ಪಿಟಿಐ): ಅತ್ಯಾಚಾರ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬ ಕೋರ್ಟ್ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಮುಖೇಶ್ ತನ್ವಾರ್(20) ಆತ್ಮಹತ್ಯೆಗೆ ಯತ್ನಿಸಿದ ಆರೋಪಿಯಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಕೊಟಾ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತಂದಿದ್ದ ವೇಳೆ, ಶೌಚಾಲಯಕ್ಕೆ ತೆರಳಿದ್ದ ಆರೋಪಿ, ಉದ್ದನೆಯ ಬಟ್ಟೆ ತುಣುಕಿನಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಆ ವೇಳೆಗೆ ಸ್ಥಳಕ್ಕೆ ಬಂದ ಇತರೆ ವಿಚಾರಣಾಧೀನ ಕೈದಿಗಳು ಆತನನ್ನು ಅಪಾಯದಿಂದ ಪಾರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.