ನವದೆಹಲಿ (ಪಿಟಿಐ): ಚೀನಾ ಹಾಗೂ ಭಾರತದ ಮಧ್ಯೆ ಪರಸ್ಪರ ನಂಬಿಕೆ ಇಲ್ಲದೆ ಹೋದರೆ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಭಾರತ ಪ್ರವಾಸದಲ್ಲಿರುವ ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಅವರು ಸೋಮವಾರ ಅಭಿಪ್ರಾಯಪಟ್ಟರು.
ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಲೀ ಅವರು ಗೌರವ ರಕ್ಷೆ ಸ್ವೀಕಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತ `ಚೀನಾ ಮತ್ತು ಭಾರತ ಮಧ್ಯೆ ಸಹಕಾರ ಮತ್ತು ಸಮಕಾಲೀನ ಅಭಿವೃದ್ಧಿ ಇಲ್ಲದೇ ಜಗತ್ತಿನ ಅಭಿವೃದ್ಧಿ ವಾಸ್ತವಕ್ಕೆ ಬರಲಾರದು' ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಲೀ ಜತೆಯಲ್ಲಿದ್ದರು. ಉಭಯ ನಾಯಕರು ಭಾನುವಾರ ನಡೆದ ಮಾತುಕತೆಗಳು ಆಶಾದಾಯಕವಾಗಿವೆ ಎಂದು ಹೇಳುತ್ತ ಮುಂದಿನ ಮಾತುಕತೆಗಳು ಕೂಡ ಉದಾರತೆಯಿಂದ ಕೂಡಿರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
`ಪರಸ್ಪರ ನಂಬಿಕೆ ವೃದ್ಧಿಸುವುದು, ಸಹಕಾರವನ್ನು ಹೆಚ್ಚಿಸುವುದು ಹಾಗೂ ಭವಿಷ್ಯವನ್ನು ಎದುರಿಸುವುದು ಇವು ಮೂರು ನನ್ನ ಪ್ರಸಕ್ತ ಭಾರತ ಪ್ರವಾಸದ ಉದ್ದೇಶಗಳಾಗಿವೆ ಎಂದು ಎಂದು ಹೇಳಿದ ಲೀ ಅವರು ಉಭಯ ದೇಶಗಳ ಮಧ್ಯೆ ಮುಂಬರುವ ದಿನಗಳಲ್ಲಿ ಪರಸ್ಪರ ನಂಬಿಕೆ ವೃದ್ಧಿಸುವ ವಿಶ್ವಾಸ ವ್ಯಕ್ತಪಡಿಸಿದರು.