ಕಾರ್ಗಲ್: ಇಲ್ಲಿಗೆ ಸಮೀಪದ ಇಡುವಾಣಿ ಗ್ರಾಮದ ಕೊಳಚಗಾರು ನಾರಾಯಣಸ್ವಾಮಿ ಎಂಬುವರ ಮಾಲೀಕತ್ವದ ನೀಲಗಿರಿ ನೆಡುತೋಪಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಾಧು ಶಂಕರ ಎಂಬ ಮಹಿಳೆಗೆ ತಾಮ್ರದ ಕುಡಿಕೆಯಲ್ಲಿಟ್ಟಿದ್ದ 27 ಬಂಗಾರದ ನಾಣ್ಯ ಮತ್ತು 2 ಚಿನ್ನದ ವಾಲೆಗಳು ದೊರಕಿವೆ.
ಅವುಗಳನ್ನು ಭೂಮಾಲೀಕ ನಾರಾಯಣ ಸ್ವಾಮಿ ಅವರು ಸರ್ಕಾರದ ವಶಕ್ಕೆ ನೀಡಿ ಪ್ರಾಮಾಣಿಕತೆ ಮೆರೆದ ಸೋಮವಾರ ವರದಿಯಾಗಿದೆ. ನೀಲಗಿರಿ ನೆಡುತೋಪಿನಲ್ಲಿ ಮಣ್ಣಿನಲ್ಲಿ ಹುದುಗಿದ್ದ ಚಿಕ್ಕ ಕಲ್ಲುಬಂಡೆಗೆ ಸಣ್ಣದಾಗಿ ಕೊರೆದಿದ್ದ ರಂಧ್ರದ ಮೇಲೆ ಕತ್ತಿಯಿಂದ ಒಡೆದಾಗ ಮೇಲ್ಪದರದಲ್ಲಿದ್ದ ಮುಚ್ಚಳಾಕಾರದ ಕಲ್ಲು ತೆರೆದುಕೊಂಡು ಒಳಗಡೆ ಪುಟ್ಟ ಕುಡಿಕೆಯಲ್ಲಿ 81 ಗ್ರಾಂ ತೂಕದ ಅಂದಾಜು ರೂ 2.5 ಲಕ್ಷ ಬೆಲೆ ಬಾಳುವ ಬಂಗಾರದ ನಾಣ್ಯ, ವಾಲೆಗಳು ಕಂಡು ಬಂದಿದ್ದವು.
ವಿಷಯ ತಿಳಿದ ಕೂಡಲೇ, ಭೂ ಮಾಲೀಕ ನಾರಾಯಣಸ್ವಾಮಿ ಅವರು, ‘ಬಂಗಾರ ನನಗೆ ಬೇಡ, ಇದು ಸರ್ಕಾರದ ಸ್ವತ್ತು. ಇದನ್ನು ವಾಪಸು ಸರ್ಕಾರದ ವಶಕ್ಕೆ ನೀಡೋಣ’ ಎಂದು ಕೆಲಸಗಾರರ ಮನವೊಲಿಸಿ ಅಪರೂಪವಾಗಿ ದೊರೆತ ಈ ನಿಧಿಯನ್ನು ಪೊಲೀಸರ ಮೂಲಕ ಸರ್ಕಾರಕ್ಕೆ ಒಪ್ಪಿಸಿದ್ದಾರೆ.
ನಾರಾಯಣಸ್ವಾಮಿ ಅವರ ಕೆಲಸವನ್ನು ಶರಾವತಿ ಕಣಿವೆ ಜನತೆ ಕೊಂಡಾಡಿದ್ದಾರೆ. ಪ್ರೇರಣೆ ನೀಡಿದ ಎಸ್ಐ ರಮೇಶ್, ಎಎಸ್ಐ ಸೆಲ್ವರಾಜು, ಮುಖ್ಯ ಕಾನ್ಸ್ಟೆಬಲ್ ಮೂಕಪ್ಪ, ಶ್ರೀಪಾದ, ಗಿಲ್ಬರ್ಟ್ ಡಯಾಸ್ ಮತ್ತಿತರರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.