ಚೆನ್ನೈ: ಪ್ರೀತಿಸಲು ನಿರಾಕರಿಸಿದ ಸಹೋದ್ಯೋಗಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಯತ್ನಿಸಿದ ಘಟನೆ ನಡೆದಿದೆ.
ವೆಲಚೆರಿಯ ಟಾಟಾ ಕನ್ಸಲ್ಟೆನ್ಸಿಯಲ್ಲಿ ಉದ್ಯೋಗಿಯಾಗಿದ್ದ ವೆಂಕಟಾಚಲಪತಿ (29) ದುಷ್ಕೃತ್ಯ ಎಸಗಿದ ಆರೋಪಿ. ಜಿ.ವೈಶ್ಯ (24) ಸೋಮವಾರ ರಾತ್ರಿ ಕೊಲೆಯಾದ ದುರ್ದೈವಿ. ತಾನು ಬಯಸಿದ್ದ ಯುವತಿ ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಆಕ್ರೋಶಗೊಂಡು ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
‘ಸಹೋದ್ಯೋಗಿ ಯುವತಿ ಕೆಲವು ದಿನಗಳಿಂದ ಮತ್ತೊಬ್ಬ ಯುವಕನ ಜತೆ ಇದ್ದಳು. ಇದನ್ನು ಅರಿತ ಆರೋಪಿಯು ಆಕೆಗೆ ಕರೆ ಮಾಡಿ ಪೆರುಂಗುಡಿ ರೈಲು ನಿಲ್ದಾಣದಲ್ಲಿ ಭೇಟಿಯಾಗುವಂತೆ ಕೇಳಿಕೊಂಡ. ಅದರಂತೆ ಆಕೆ ಅಲ್ಲಿಗೆ ಬಂದಾಗ ಜಗಳ ಶುರು ಮಾಡಿ ಚಾಕುವಿನಿಂದ ಮನಬಂದಂತೆ ಇರಿದ. ನಂತರ ತಾನೂ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ’ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡಿರುವ ಆರೋಪಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.