ಬೆಂಗಳೂರು: 2014ನೇ ಸಾಲಿನ ಕನಕಶ್ರೀ ಪ್ರಶಸ್ತಿಯು ಹಿರಿಯ ವಿದ್ವಾಂಸ ಪ್ರೊ.ಎ.ವಿ. ನಾವಡ ಅವರಿಗೆ ಸಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆಯುವ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಪ್ರಶಸ್ತಿಯು ₨ 5 ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕನಕದಾಸರ ಸಾಹಿತ್ಯ, ಜೀವನ ಮತ್ತು ಸಂದೇಶಗಳ ಕುರಿತು ಅನನ್ಯ ಸೇವೆ ಸಲ್ಲಿಸಿದವರನ್ನು ಗೌರವಿಸಲು ಈ ಪ್ರಶಸ್ತಿಯನ್ನು 2008ರಿಂದ ನೀಡಲಾಗುತ್ತಿದೆ. ಪ್ರೊ. ನಾವಡರು ಕನ್ನಡ ಮತ್ತು ತುಳು ವಿದ್ವಾಂಸರಾಗಿ ಹೆಸರು ಮಾಡಿದವರು. ಜಾನಪದ ವಿಜ್ಞಾನ, ನಿಘಂಟು ವಿಜ್ಞಾನ ಮತ್ತು ಹರಿದಾಸ ಸಾಹಿತ್ಯ ಕ್ಷೇತ್ರಗಳಲ್ಲೂ ಅವರು ವಿಶೇಷ ಅಧ್ಯಯನ ನಡೆಸಿದ್ದಾರೆ. ಕಡೆಂಗೋಡ್ಲು ಶಂಕರ ಭಟ್ಟರ ಬದುಕು–ಬರಹ ಕುರಿತ ಕೃತಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.