ಬೆಂಗಳೂರು: ಖೋಟಾನೋಟು ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ರೂ 9.13 ಲಕ್ಷ ಖೋಟಾನೋಟು ಹಾಗೂ ರೂ 1.72 ಲಕ್ಷ ಮೌಲ್ಯದ ಅಸಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಡುಗೊಂಡನಹಳ್ಳಿಯ ಸೈಯದ್ ಆಸೀಫ್ (21), ಚಿಕ್ಕಬಳ್ಳಾಪುರ ಜಿಲ್ಲೆಯ ಅಫ್ರೋಜ್ (41), ಮೈಸೂರಿನ ಆಸೀಫ್ ಉಲ್ಲಾಖಾನ್ (21) ಮತ್ತು ಮಹೀಬ್ ಉಲ್ಲಾಖಾನ್ (31), ಪಶ್ಚಿಮಬಂಗಾಳ ಮೂಲದ ಸಾಬೀರ್ ಅಲಿಬಾಬು (23) ಹಾಗೂ ಮಸೂದ್ (19) ಬಂಧಿತರು.
‘ಆರೋಪಿಗಳು ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಬಂಧಿತರಾಗಿ ಕೋಲ್ಕತ್ತ ಜೈಲಿನಲ್ಲಿರುವ ಇಷಾಕ್ ಮತ್ತು ಶಾನ್ನವಾಜ್ ಎಂಬುವರ ಜತೆ ನಂಟು ಇಟ್ಟುಕೊಂಡಿದ್ದರು. ಇಷಾಕ್್ ಮತ್ತು ಶಾನ್ನವಾಜ್ ಸೂಚನೆಯಂತೆ ಆರೋಪಿಗಳು ಖೋಟಾನೋಟು ದಂಧೆ ನಡೆಸುತ್ತಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಪಾಕಿಸ್ತಾನದಲ್ಲಿ ಮುದ್ರಿತವಾದ ಖೋಟಾನೋಟುಗಳನ್ನು ಬಾಂಗ್ಲಾದೇಶದ ಮೂಲಕ ಪಶ್ಚಿಮ ಬಂಗಾಳ ಮಾರ್ಗವಾಗಿ ದೇಶಕ್ಕೆ ತಂದು ಬೆಂಗಳೂರು ಮತ್ತು ಮೈಸೂರಿನಲ್ಲಿ ಚಲಾವಣೆ ಮಾಡುತ್ತಿದ್ದರು. ಆರೋಪಿಗಳಾದ ಅಜು, ಅಫುಲ್, ಮುನೀರ್ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.
ಬಂಧಿತರು ಎ.ನಾರಾಯಣಪುರ ಜಂಕ್ಷನ್ ಬಳಿ ಖೋಟಾನೋಟು ಚಲಾವಣೆ ಮಾಡುತ್ತಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ 10 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
*ಜಪ್ತಿ ಮಾಡಲಾಗಿರುವ ಖೋಟಾ ನೋಟುಗಳು ಅಸಲಿ ನೋಟುಗಳಂತೆಯೇ ಇವೆ. ಅವುಗಳಿಗೂ ಅಸಲಿ ನೋಟುಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ
ಎಂ.ಎನ್. ರೆಡ್ಡಿ, ನಗರ ಪೊಲೀಸ್ ಕಮಿಷನರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.