ಮುಂಬೈನ ಶಕ್ತಿ ಮಿಲ್ಸ್ ಆವರಣದಲ್ಲಿ ನಡೆದ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಮೂವರು ಆರೋಪಿಗಳಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷವಷ್ಟೇ ಕಾನೂನು ತಿದ್ದುಪಡಿಯಾಗಿ ಸೇರ್ಪಡೆಯಾಗಿರುವ ಐಪಿಸಿ 376 (ಇ) ಸೆಕ್ಷನ್ ಅನ್ವಯ ಗಲ್ಲು ಶಿಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಧಿಸಲಾದ ಪ್ರಕರಣ ಇದು. 2012ರ ಡಿಸೆಂಬರ್ 16ರಂದು ದೆಹಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ, ನ್ಯಾಯಮೂರ್ತಿ ವರ್ಮಾ ಸಮಿತಿ ನೀಡಿದ್ದ ಶಿಫಾರಸುಗಳ ಅನ್ವಯ ಈ ಕಾನೂನು ತಿದ್ದುಪಡಿ ಆಗಿತ್ತು.
ಅತ್ಯಾಚಾರಿಗಳು ಒಂದಲ್ಲ ಎರಡು ಬಾರಿ ಮತ್ತದೇ ಅಪರಾಧ ಎಸಗಿದ್ದಲ್ಲಿ ಅಂತಹವರಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಸೆಕ್ಷನ್ ಅವಕಾಶ ಒದಗಿಸುತ್ತದೆ. ಹೀಗಾಗಿ ಟೆಲಿಫೋನ್ ಆಪರೇಟರ್ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗಳು ಮತ್ತೊಮ್ಮೆ ಪತ್ರಿಕಾ ಛಾಯಾಗ್ರಾಹಕಿ ಮೇಲೆಯೂ ಅತ್ಯಾಚಾರ ಎಸಗಿರುವುದರಿಂದ ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಜೊತೆಗೆ ಅಂತಹ ಬರ್ಬರ ಕೃತ್ಯ ಎಸಗುವಾಗ ಸಂತ್ರಸ್ತೆಯರ ಅಸಹಾಯಕತೆಯನ್ನು ಲೇವಡಿ ಮಾಡಿ ಕ್ರೌರ್ಯ ಪ್ರದರ್ಶಿಸಿರುವುದನ್ನು ಕೋರ್ಟ್ ತೀವ್ರವಾಗಿ ಪರಿಗಣಿಸಿರುವುದು ಸರಿಯಾಗಿಯೇ ಇದೆ. ಅಪರಾಧ ನಡೆದ ಒಂದೇ ವರ್ಷದಲ್ಲಿ ತ್ವರಿತವಾಗಿ ವಿಚಾರಣೆ ನಡೆದು ತೀರ್ಪು ಪ್ರಕಟವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಹೊಸ ಕಾನೂನಿಗೆ ಪೂರ್ಣ ಬದ್ಧವಾಗಿರುವ ತೀರ್ಪು ಸಮಾಜಕ್ಕೆ ಬಲವಾದ ಸಂದೇಶವನ್ನೇ ರವಾನಿಸಿದೆ.
ಆದರೆ ಗಲ್ಲು ಶಿಕ್ಷೆ ಎಂಬುದು ಅತ್ಯಾಚಾರದಂತಹ ಅಪರಾಧಗಳ ಅಂತ್ಯಕ್ಕೆ ಕಾರಣವಾಗಬಹುದೆ ಎಂಬ ಬಗ್ಗೆ ವಿಭಿನ್ನ ವಾದಗಳಿವೆ. ಗಲ್ಲು ಶಿಕ್ಷೆಯ ಭಯ, ಅತ್ಯಾಚಾರ ಅಪರಾಧದ ತಡೆಗೆ ಪರಿಣಾಮಕಾರಿಯಾಗುವುದು ಸಾಧ್ಯವಿಲ್ಲ. ಬದಲಿಗೆ ಸಾಕ್ಷ್ಯವನ್ನು ಪೂರ್ಣ ನಾಶ ಮಾಡುವುದಕ್ಕಾಗಿ ಅತ್ಯಾಚಾರ ಎಸಗಿದ ನಂತರ ಮಹಿಳೆಯನ್ನು ಕೊಲೆ ಮಾಡುವ ಪ್ರಸಂಗಗಳು ಹೆಚ್ಚಾಗುವ ಅಪಾಯಗಳೇ ಜಾಸ್ತಿ ಎಂಬಂತಹ ನಿಲುವನ್ನು ಮಹಿಳಾ ಹೋರಾಟಗಾರರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗಲ್ಲು ಶಿಕ್ಷೆ ಎಂಬುದು ನಾಗರಿಕ ಸಮಾಜಕ್ಕೂ ಒಗ್ಗುವಂತಹದ್ದಲ್ಲ. ಜಗತ್ತಿನಲ್ಲಿ ಈಗಾಗಲೇ ಹಲವು ರಾಷ್ಟ್ರಗಳು ಗಲ್ಲು ಶಿಕ್ಷೆ ರದ್ದುಪಡಿಸಿವೆ ಎಂಬುದನ್ನು ಗಮನಿಸಬೇಕು.
ಮಾಡಿದ ತಪ್ಪಿನಿಂದ ಪಾಠ ಕಲಿಯದೆ ಮತ್ತದೇ ಅಪರಾಧ ಎಸಗುವ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಬೇಕು ಎಂಬ ಮಾತನ್ನು ಬೇರೆ ರೀತಿಯೂ ವ್ಯಾಖ್ಯಾನಿಸಬಹುದು. ಮೊದಲ ಅಪರಾಧಕ್ಕೆ ಶಿಕ್ಷೆಯನ್ನು ಪೂರ್ಣವಾಗಿ ಅನುಭವಿಸಿದ ನಂತರವೂ ಪಾಠ ಕಲಿಯದೆ ಎರಡನೇ ಅತ್ಯಾಚಾರ ಎಸಗಿದಲ್ಲಿ ಅಂತಹವರನ್ನು ಪುನರಾವರ್ತಕ ಅಪರಾಧಿ ಎಂದು ಪರಿಗಣಿಸಬೇಕೆಂಬ ವಾದ ಇದೆ.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿಗಳ ವಿಚಾರಣೆ ಸಂದರ್ಭದಲ್ಲಿ ಈ ವಿಚಾರಗಳು ಹೆಚ್ಚು ಸ್ಪಷ್ಟತೆ ಪಡೆದುಕೊಳ್ಳಬಹುದು. ಆದರೆ, ತ್ವರಿತವಾಗಿ ಶಿಕ್ಷೆಯಾಗುವುದು ಅತ್ಯಾಚಾರ ಪ್ರಕರಣಗಳ ನಿಯಂತ್ರಣಕ್ಕೆ ಒಂದು ಮಾರ್ಗ ಎಂಬುದು ಖಂಡಿತಾ ನಿಜ. ಈ ಪ್ರಕರಣದಲ್ಲಿ ಅದು ಸಾಧ್ಯವಾಗಿರುವುದು ಸಮಾಧಾನಕರ. ಆದರೆ ದೀರ್ಘಾವಧಿಯಲ್ಲಿ, ಲೈಂಗಿಕತೆ ಹಾಗೂ ಮಹಿಳೆ ಕುರಿತಾದ ಮನೋಭಾವಗಳ ಬದಲಾವಣೆಗಳಷ್ಟೇ ಅತ್ಯಾಚಾರದಂತಹ ಅಪರಾಧಗಳ ತಡೆಗೆ ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವಾಗಬಲ್ಲುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.