ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಳಿದ ಶಿಲಾಬಾಲಿಕೆ, ಬೆದರಿದ ಎತ್ತು

Last Updated 31 ಜನವರಿ 2015, 20:25 IST
ಅಕ್ಷರ ಗಾತ್ರ

ಶ್ರವಣ ಬೆಳಗೊಳ: ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ವತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಲಾ ಬಾಲಕಿ­ಯರನ್ನು ಕಬ್ಬಿಣದ ಸಣ್ಣ ತಂತಿಗಳಿಂದ ಬಂಧಿ­ಸಿ­ಡ­ಲಾದ ವಿಶಿಷ್ಟ ಸ್ತಬ್ಧಚಿತ್ರ ನೋಡುಗರನ್ನು ಸೆಳೆ­ಯಿತು. ಬೇಲೂರಿನ ಚೆನ್ನಕೇಶವ ಮಂದಿರದ ಪ್ರತಿ­ಕೃತಿಯ ಸುತ್ತ ನಾಲ್ಕು ‘ಜೀವಂತ ಶಿಲಾ­ಬಾಲಿಕೆ’ಯರು ನಿಂತಿದ್ದರು. ಇವರು ತಮ್ಮ ಮೈಗೆಲ್ಲಾ ಬೆಳ್ಳಿ ಬಣ್ಣವನ್ನು ಮೆತ್ತಿಕೊಂಡು   ಬಟ್ಟೆ ತೊಟ್ಟು ನಿಂತಿದ್ದರು. ಕೈಯಲ್ಲಿ ದರ್ಪಣ ಹಿಡಿದು ನಿಂತಿದ್ದ ಜೀವಂತ ಶಿಲಾಬಾಲಿ­ಕೆಯಂತೂ ನೋಡುಗ­ರನ್ನು ಬಹುವಾಗಿ ಆಕರ್ಷಿಸಿದಳು. ಆದರೆ, ಸೂರ್ಯನ ಬಿರುಬಿಸಿಲಿಗೆ ನಿಂತಿದ್ದ ಅವರು ಎಲ್ಲಿ ಕೂತು ಬಿಡುತ್ತಾರೋ ಎಂದು ಬಿಗಿದಿದ್ದ ಸರಪಳಿ­ಯಿಂದಾಗಿ ಅವರು ಕೂರದೇ ಬಸವಳಿಯ­ಬೇಕಾ­ಯಿತು. ಎರಡೂವರೆ ಕಿ.ಮೀ ಉದ್ದದ ಮೆರವಣಿಗೆ­ಯಲ್ಲಿ ನೋಡಿದವರೆಲ್ಲಾ ಪಾಪ ಎಂದರೇ ವಿನಾ ಇದು ಸುಂದರವಾಗಿತ್ತು ಎಂದು ಬಣ್ಣಿಸಲಿಲ್ಲ...!

ನೀರಿನ ಕೊರತೆ...!: ಮೆರವಣಿಗೆಯಲ್ಲಿ ಕುಣಿದು ಕುಣಿದು ಬಸವಳಿದ ಕಲಾತಂಡಗಳಿಗೆ ಕುಡಿಯುವ ನೀರಿನ ಪೂರೈಕೆ ಸರಿಯಾಗಿರಲಿಲ್ಲ. ಬಹಳಷ್ಟು ಕಡೆ ಹಾದಿ­ಯಲ್ಲಿ ಸಿಕ್ಕ ಮನೆಯವರೇ ನೀರಿನ ಬಾಟಲಿ­ಗ­ಳನ್ನು ಕೊಡುತ್ತಿದ್ದರು. ಮೆರವಣಿಗೆ ಕ್ರಮಿಸುವ ಹಾದಿಯೂ ಹೆಚ್ಚಾಯಿತು ಎಂದು ಕೆಲವು ಕಲಾವಿ­ದರು ಹೇಳಿಕೊಳ್ಳದೇ ಹೋದರೂ ಇನ್ನೆಷ್ಟು ದೂರ ಇದೆ ಮುಖ್ಯ ವೇದಿಕೆ ಎಂದು ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೆರವಣಿಗೆಯಲ್ಲಿ ಸಾಗಿದ ವಿಐಪಿ ಕಾರುಗಳು...!: ಈ ಬಾರಿಯ ಮೆರವಣಿಗೆ­ಯಲ್ಲಿ ಕೇವಲ ಕಲಾ­ತಂಡಗಳು, ಸ್ತಬ್ಧಚಿತ್ರಗ­ಳಷ್ಟೇ ಇರಲಿಲ್ಲ. ಇವುಗಳ ಜತೆಗೆ ವಿಐಪಿ ಕಾರುಗಳೂ ಸಾಗಿದ ದೃಶ್ಯಕ್ಕೆ ಮೆರ­ವಣಿಗೆ ಹಾದಿ ಸಾಕ್ಷ್ಯ ಒದಗಿಸಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಅನಾರೋಗ್ಯ ಸಮಸ್ಯೆ.   ಹೀಗಾಗಿ, ಅವರು ಕಾರಿನಲ್ಲಿ ಹೊರಟರು. ಆದರೆ, ಇವರ ಕಾರಿನ ಹಿಂದೆ ಏಳೆಂಟು ವಿಐಪಿ ಅಧಿ­ಕಾರಿಗಳು ಹೊರಟು ಕಲಾತಂಡಗಳಿಗೆ ಕಿರಿಕಿರಿ ಉಂಟು ಮಾಡಿದವು.

ಮೆರವಣಿಗೆಯ ಹಾದಿಯಲ್ಲಿಯೇ ಪಾರ್ಕಿಂಗ್‌...!: 81 ಕಲಾತಂಡಗಳು ಸಾಗುವ ಹಾದಿ­ಯಲ್ಲಿ ಸಾಲು ಸಾಲಾಗಿ ಅನೇಕ ಕಾರುಗಳು ಪಾರ್ಕಿಂಗ್‌ ಮಾಡಿದ್ದವು. ಬೈಕ್‌ಗಳೂ ಸಹ ಇದ್ದು ಮೆರವಣಿಗೆ ಯುದ್ದಕ್ಕೂ ಸಾಗಿದ ಜನರಿಗೆ ಹಾಗೂ ಕಲಾ­ತಂಡ­ಗಳಿಗೆ ಇವು ತೊಡಕಾಗಿ ಪರಿಣ­ಮಿಸಿದವು. ಇವುಗ­ಳನ್ನು ತೆರವುಗೊಳಿಸುವ ಕಡೆಗೆ ಯಾರೊ­ಬ್ಬರೂ ಗಮನ ನೀಡಲಿಲ್ಲ.

ಹಿಂದಿ ಭಾಷಣದ ವಿರುದ್ಧ ಘೋಷಣೆ: ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ಸಮಿತಿ ಹಾಗೂ ಇತರ ಕನ್ನಡಪರ ಸಂಘಟನೆಗಳು ಮೆರವಣಿಗೆಯಲ್ಲಿ ರಾಜ್ಯ­ಪಾಲರು ಹಿಂದಿ­ಯಲ್ಲಿ ಭಾಷಣ ಮಾಡಬಾರದು ಎಂದು ಘೋಷಣೆ ಕೂಗಿದ್ದು ಗಮನ ಸೆಳೆಯಿತು. ರಾಜ್ಯ­ಪಾಲರು ಕನ್ನಡ ಕಲಿಯಬೇಕು. ಹಿಂದಿ ಬಿಡ­ಬೇಕು ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿ ಒದ್ದ ಎತ್ತುಗಳು...!
ಸಿದ್ದಲಿಂಗಯ್ಯ ಅವರು ಮೈಸೂರು ಪೇಟ ಧರಿಸಿ ಪತ್ನಿ ಸಮೇತರಾಗಿ ಎತ್ತಿನ­ಗಾಡಿಯಲ್ಲಿ ಕುಳಿತರು. ಶಾಸಕ ಬಾಲಕೃಷ್ಣ ಅವರು ಸಾರಥಿಯಾಗಿ ಬಂಡಿ ಮುನ್ನಡೆಸಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆದರೆ, ಮೆರವಣಿಗೆಯಲ್ಲಿ ಸಿದ್ದಲಿಂಗಯ್ಯ ಅವರು ಕುಳಿತಿದ್ದ ಗಾಡಿಯ ಹಿಂದೆ ಬರುತ್ತಿದ್ದ ಗಾಡಿಗಳ ಎತ್ತುಗಳು ಬೆದ­ರಿದವು. ಕೊನೆಗೆ ನಾಲ್ಕೈದು ಮಂದಿ ಹರ­ಸಾಹಸ­ಪಟ್ಟು ಮೂಗುದಾರವನ್ನು ಬಿಗಿಯಾಗಿ ಹಿಡಿದುಕೊಂಡು ಸಾಗಬೇಕಾಯಿತು. ಒಮ್ಮೊಮ್ಮೆ ಎತ್ತುಗಳು ಸನಿಹದಲ್ಲಿ ಹಾದು ಹೋಗುತ್ತಿದ್ದ ಜನ­ರಿಗೆ ಒದೆಯುತ್ತಲೂ ಇದ್ದವು. ಮುಖ್ಯ ವೇದಿಕೆಯ ಬಳಿ ಬಂದಾಗಲಂತೂ ವಿಪರೀತ ಎಗರಾಡ­ತೊಡ­ಗಿ­ದವು. ಇದ­ರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT