ಬೆಂಗಳೂರು: ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿರ್ಮೂಲನೆ ಕಾಯ್ದೆ ಮತ್ತು 2006ರ ಬಾಲನ್ಯಾಯ ಕಾಯ್ದೆಗೆ (ಪೋಷಣೆ ಮತ್ತು ರಕ್ಷಣೆ) ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಪರ್ಯಾಯ ಕಾನೂನು ವೇದಿಕೆ ಸೇರಿ ವಿವಿಧ ಸಂಘಟನೆಗಳು ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್ನ ವಾಸುದೇವ ಶರ್ಮ ಮಾತನಾಡಿ, ‘ತಿದ್ದುಪಡಿ ಮೂಲಕ ಅಪಾಯಕಾರಿ ಉದ್ದಿಮೆಗಳಲ್ಲಿ 14 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದುಡಿಮೆಯನ್ನು ನಿಷೇಧಿಸಿದಂತಾಗುತ್ತದೆ. ಇದು ಸ್ವಾಗತಾರ್ಹ. ಆದರೆ, ಮನೆಗೆಲಸ ಹಾಗೂ ಗೃಹ ಉದ್ದಿಮೆಗಳಲ್ಲಿ ಮಕ್ಕಳು ಕೆಲಸ ಮಾಡಬಹುದು ಎಂದು ಹೇಳಲಾಗಿದೆ’ ಎಂದರು.
ಹೋಟೆಲ್, ಬೀಡಿ ಕಟ್ಟುವುದು, ಅಗರಬತ್ತಿ ತಯಾರಿಕೆಯಲ್ಲಿ ಮಕ್ಕಳ ಕೆಲಸವನ್ನು ಕಾನೂನುಬದ್ಧಗೊಳಿಸಿದಂತಾಗುತ್ತದೆ. ಇದು ಅಪಾಯಕಾರಿ ಎಂದು ಹೇಳಿದರು.
ಕಾಯ್ದೆಗೆ ತಿದ್ದುಪಡಿ ತಂದು ಕೊಲೆ, ಅತ್ಯಾಚಾರದಂತಹ ಗಂಭೀರ ಅಪರಾಧ ಎಸಗಿರುವ 16ರಿಂದ 18 ವರ್ಷದ ಒಳಗಿನ ಮಕ್ಕಳನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ. ಇದರಿಂದ ಮಕ್ಕಳು ಮುಂದೆ ಸಮಾಜ ಕಂಟಕರಾಗಲು ದಾರಿ ಮಾಡಿದಂತಾಗುತ್ತದೆ ಎಂದು ದೂರಿದರು.
‘ಅಪರಾಧ ಎಸಗಿದ ಮಕ್ಕಳ ಮನಪರಿವರ್ತನೆ ಮಾಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ಆದರೆ, ಆ ನಿಟ್ಟಿನಲ್ಲಿ ಚಿಂತನೆ ನಡೆಸದೆ ಅವರನ್ನು ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರು ಎಂದು ತಿಳಿದು ಬಂದರೆ ಶಿಕ್ಷೆ ವಿಧಿಸಬಹುದಾಗಿದೆ. ಇದರಿಂದ ಮಕ್ಕಳು ಇನ್ನೂ ಗಂಭೀರ ಅಪರಾಧಗಳಲ್ಲಿ ತೊಡಗುವ ಅಪಾಯವಿದೆ’ ಎಂದು ಅರೋಪಿಸಿದರು.