ರಾಯಚೂರು: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಮತ್ತು ಕಳೆದ ವಾರ ಉತ್ತಮ ವಾಗಿ ಮಳೆ ಸುರಿದಿರು ಕಾರಣ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡಲು ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ನಿದೇರ್ಶಕ ಡಾ.ಕಿರಣ ಕುಮಾರ ಅವರನ್ನು ಮಂಗಳವಾರ ಭೇಟಿ ಮಾಡಿದ ರೈತ ಸಂಘದ ಮುಖಂಡರು, ಕಳೆದ ವರ್ಷ ರೈತರು ಬೀಕರ ಬರಕ್ಕೆ ತುತ್ತಾಗಿದ್ದಾರೆ. ಬಿ.ಟಿ. ಹತ್ತಿಗೆ ಗುಲಾಬಿ ಕಾಯಿಕೊರಕ ರೋಗ ತಗುಲಿ ನಷ್ಟ ಅನಿಭವಿಸಿದ್ದಾರೆ. ಈ ಸಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕೃಷಿ ಇಲಾಖೆ ಮುಂದಾಗಬೇಕು ಎಂದು ಕೋರಿದರು.
ಹೆಸರು, ತೊಗರಿ, ಸೂರ್ಯಕಾಂತಿ, ಭತ್ತ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೀಜಗಳನ್ನು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೆಂದ್ರಗಳಲ್ಲಿ ಸಾಕಷ್ಟು ದಾಸ್ತಾನು ಮಾಡಿಕೊಂಡು ಈ ತಿಂಗಳ ಅಂತ್ಯದಿಂದಲೇ ಬೀಜ ವಿತರಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ದೇಶೀಯ ಹತ್ತಿ ತಳಿಗಳ ಬೀಜವನ್ನು ರೈತರಿಗೆ ಡೆಮೋ ಪದ್ಧತಿಯಲ್ಲಿ ವಿತರಣೆ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ಪಸ್ವಾಮಿ ಉಡುಮಗಲ್, ತಿಮ್ಮಪ್ಪ ಬಾಫೂರು, ರಾಘವೇಂದ್ರ ಶೆಟ್ಟಿ, ಬಿ.ನರಸಿಂಹಲು, ಮಲ್ಲಣ್ಣ ದಿನ್ನಿ, ಕೆ.ವೀರೇಶಗೌಡ, ಹುಲಿಗೆಪ್ಪ ಜಾಲಿಬೆಂಚಿ, ವಿ.ಹನುಮಂತು ಹಾಜರಿದ್ದರು.