ಬೆಂಗಳೂರು: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್) ವತಿಯಿಂದ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ‘ಬಿ.ಪ್ಯಾಕ್ ಹಸಿರು ರಾಯಭಾರಿ ಕಾರ್ಯಕ್ರಮ’ಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಬಿ.ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್, ‘ಸಮಿತಿಯು ಪರಿಸರ ಸಂಬಂಧಿ ವಿಷಯಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ (ಇಂಟರ್ನ್ಶಿಪ್) ನೀಡಲಿದೆ. ಇದರಲ್ಲಿ ಆರು ತರಗತಿಗಳು ಸೇರಿವೆ. ವಿದ್ಯಾರ್ಥಿಗಳು ತರಬೇತಿ ವೇಳೆ ವಿವಿಧ ಸ್ಥಳಗಳಿಗೆ ಭೇಟಿ, ಯೋಜನಾ ವರದಿ ತಯಾರಿಸುವುದು, ದಾಖಲೀಕರಣ, ವರದಿ ಸಲ್ಲಿಕೆ ಮಾಡಬೇಕಿದೆ’ ಎಂದರು.
‘ನಗರದ ಕ್ಲಿಷ್ಟಕರ ಪರಿಸರ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ತರಬೇತಿಯ ಮುಖ್ಯ ಉದ್ದೇಶ. ನಗರ ಪರಿಸರ ವಿಷಯಗಳು, ನೀರಿನ ನಿರ್ವಹಣೆ, ಕಸ ನಿರ್ವಹಣೆ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಆಸಕ್ತ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದರು.
‘ನಗರದಲ್ಲಿ 1985ರಲ್ಲಿ 51 ಉತ್ತಮ ಕೆರೆಗಳು ಇದ್ದವು. ಈಗ 17 ಕೆರೆಗಳು ಮಾತ್ರ ಉಳಿದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಎಲ್ಲ ಕೆರೆಗಳು ನಾಶವಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು. ‘ಬಿ.ಗ್ರೀನ್’ ಕಾರ್ಯಕ್ರಮದ ಯೋಜನಾ ನಿರ್ದೇಶಕ ಎಸ್. ರವಿಕುಮಾರ್ ಮಾತನಾಡಿ, ‘ಈಗಾಗಲೇ ಐದು ಕಾಲೇಜುಗಳಲ್ಲಿ ತರಬೇತಿ ಆರಂಭಿಸಲಾಗಿದೆ. ನಗರದ ಎಲ್ಲ ಕಾಲೇಜುಗಳಲ್ಲಿ ತರಬೇತಿ ನೀಡುವ ಉದ್ದೇಶ ಇದೆ’ ಎಂದರು. ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅರ್ಪಣಾ ಕಾರ್ಯಕ್ರಮ ಉದ್ಘಾಟಿಸಿದರು.