ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಉದ್ಯಮಿ ಕುಮಾರ ಮಂಗಳಂ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರೇಕ್ ಮತ್ತಿತರರ ವಿರುದ್ಧದ ಪ್ರಕರಣದ ವಿವರಣಾತ್ಮಕ ಮತ್ತು ವಿಸ್ತೃತ ಅಂತಿಮ ಪರಿಸಮಾಪ್ತಿ ವರದಿಯನ್ನು ಸಿಬಿಐ ವಿಶೇಷ ಕೋರ್ಟ್ಗೆ ಮಂಗಳವಾರ ಸಲ್ಲಿಸಿತು.
ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರಿಗೆ ವರದಿ ಸಲ್ಲಿಸಿದ ಸಂಸ್ಥೆ, ಪ್ರಕರಣದ ಕುರಿತು ನಡೆಸಲಾದ ತನಿಖೆಯ ಸಂಪೂರ್ಣ ವಿವರವನ್ನು ಇದು ಒಳಗೊಂಡಿದೆ ಎಂದು ತಿಳಿಸಿತು.
‘ತನಿಖಾ ಅಧಿಕಾರಿ (ಐಒ) ಡಿಎಸ್ಪಿ ಕೆ.ಎಲ್. ಮೋಸೆಸ್ ಅವರು ವಿವರಣಾತ್ಮಕ ಮತ್ತು ವಿಸ್ತೃತವಾದ ಪರಿಷ್ಕೃತ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಅಂತಿಮ ವರದಿ ಪರಿಸಮಾಪ್ತಿ ವರದಿಯ ಲಕ್ಷಣವನ್ನೂ ಹೊಂದಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಎಸ್. ಚೀಮಾ ಅವರು ವಾದ ಮುಂದುವರಿಸಲು ಕಾಲಾವ-ಕಾಶ ಕೇಳಿದ್ದು, ವಿಚಾರಣೆಯನ್ನು ನ.10ಕ್ಕೆ ನಿಗದಿ-ಪಡಿಸಲಾಗಿದೆ’ ಎಂದು ನ್ಯಾಯಾಧೀಶರು ತಿಳಿಸಿದರು.
ತನಿಖೆ ವೇಳೆ ವಶಪಡಿಸಿಕೊಂಡ ಕೆಲವು ಹೆಚ್ಚುವರಿ ದಾಖಲೆಗಳನ್ನೂ ಸಿಬಿಐ ಕೋರ್ಟ್ಗೆ ಒಪ್ಪಿಸಿತು.