ಕೆಂಗೇರಿ: ಪ್ರೇಕ್ಷಕರ ಪ್ರೋತ್ಸಾಹ ಸಿಗುತ್ತಿರುವುದರಿಂದ ನಗರದಲ್ಲಿ ಹಲವಾರು ರಂಗತಂಡಗಳು ಕ್ರಿಯಾಶೀಲವಾಗಿದ್ದು, ಪ್ರೇಕ್ಷಕರು ತಮ್ಮ ಮಕ್ಕಳನ್ನು ರಂಗಶಿಬಿರಗಳಿಗೆ ಕಳುಹಿಸಿದರೆ ಮಕ್ಕಳಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವ ಬೆಳೆಯಬಲ್ಲದು ಎಂದು ರಂಗಾಯಣದ ಮಾಜಿ ನಿರ್ದೇಶಕ ಬಿ.ವಿ ರಾಜಾರಾಂ ಅಭಿಪ್ರಾಯಪಟ್ಟರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸೋಮವಾರ ಏಳನೇ ವರ್ಷದ ‘ನಾಟಕ ಬೆಂಗಳೂರು–14’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಕಲಾವಿದರು ಚಲನಚಿತ್ರ ಕ್ಷೇತ್ರದಲ್ಲೂ ಹೆಸರು ಮಾಡಿದ್ದಕ್ಕೆ ದೊಡ್ಡ ಇತಿಹಾಸವೇ ಇದೆ. ಸ್ವತಃ ಗುಬ್ಬಿ ವೀರಣ್ಣನವರು ಇಂತಹ ಸಾಧನೆ ಮೆರೆದಿದ್ದಾರೆ. ನಮ್ಮ ರಂಗಭೂಮಿ ಕಲಾವಿದರು ಕಿರುತೆರೆಗೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
‘ಇತ್ತೀಚೆಗೆ ರಂಗತಂಡಗಳ ಪ್ರಯತ್ನಗಳು ಆಶಾದಾಯಕವಾಗಿವೆ. ರಂಗಭೂಮಿಯಲ್ಲಿ ನಿಷ್ಠೆಯಿಂದ ದುಡಿದವರನ್ನು ಜನ ಗುರುತಿಸಿ ಗೌರವಿಸುತ್ತಾರೆ. ಇದಕ್ಕೆ ನಾನೇ ಸಾಕ್ಷಿ’ ಎಂದು ಅಧ್ಯಕ್ಷತೆ ವಹಿಸಿದ್ದ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ ಹೇಳಿದರು.
ಕಲಾ ನಿರ್ದೇಶಕ ಶಶಿಧರ್ ಅಡಪ, ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ, ತೋ. ನಂಜುಂಡಸ್ವಾಮಿ ಇದ್ದರು.