ಗುಡಗಾಂವ: ಕರ್ನಾಟಕದ ಭಟ್ಕಳ ಕಡಲ ತೀರದಲ್ಲಿ ಕಳ್ಳ ಸಾಗಣೆ ಮತ್ತು ಉಗ್ರರ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿರುವ ಶಂಕೆ ಇರುವುದರಿಂದ ಇವುಗಳ ನಿಯಂತ್ರಣಕ್ಕೆ ಈ ಕಡಲತೀರದ ಮೇಲೆ ತೀವ್ರ ನಿಗಾ ಇಡುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.
ಗುಡಗಾಂವದಲ್ಲಿ ಸ್ಥಾಪಿಸಿರುವ ಭಾರತೀಯ ನೌಕಾದಳದ ರಾಷ್ಟ್ರೀಯ ಸಂವಹನ ಸಮನ್ವಯ, ನಿಯಂತ್ರಣ, ಬೇಹುಗಾರಿಕಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಗೋವಾ–ಬೆಂಗಳೂರು, ಗೋವಾ –ರತ್ನಗಿರಿ ವ್ಯಾಪ್ತಿಯಲ್ಲಿ ರೇಡಾರ್ ವ್ಯವಸ್ಥೆ ಇಲ್ಲದಿರುವುದು ಲೋಪವಾಗಿದ್ದು ಇದನ್ನು ಸರಿಪಡಿಸುವುದಾಗಿ ಹೇಳಿದರು.
ಭಾರತೀಯ ಕಡಲತೀರದ ರಕ್ಷಣೆಗಾಗಿ ನೌಕಾದಳ ₨ 450 ಕೋಟಿ ವೆಚ್ಚದಲ್ಲಿ ರೂಪಿಸಿರುವ ಕರಾವಳಿ ಕಣ್ಗಾವಲು ವ್ಯವಸ್ಥೆಯಲ್ಲಿ ಇನ್ನೂ ಅನೇಕ ಲೋಪದೋಷ ಉಳಿದಿವೆ ಎಂದು ಪರಿಕ್ಕರ್ ಒಪ್ಪಿಕೊಂಡರು. ಕೊರತೆಗಳನ್ನು ಸರಿಪಡಿಸಿ ಕರಾವಳಿ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ಬಲಪಡಿಸಲು ಇನ್ನೂ ಕೆಲವು ವರ್ಷ ಬೇಕಾಗಬಹುದು ಎಂದರು.