ನರೇಂದ್ರ ಮೋದಿ ಆಗಮನದ ಅನಿವಾರ್ಯವನ್ನು ಮುನ್ನೋಡಿ ಸಹಜವಾಗಿಯೇ ಬೆದರಿರುವ ಪ್ರಗತಿಪರರೆಂದು ಹೇಳಲಾಗುವ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ದೇವನೂರ ಮಹಾದೇವ ಮುಂತಾದ ಬುದ್ಧಿಜೀವಿಗಳು ಈ ಅನಿವಾರ್ಯವನ್ನು ತಡೆಯಲು ಹಿಡಿದಿರುವ ಹಾದಿ ಮಾತ್ರ ಕರುಣಾಜನಕ ಮಾತ್ರವಲ್ಲ, ಅನುಮಾನಾಸ್ಪದವೂ ಎನ್ನಿಸುತ್ತಿದೆ.
ಮೋದಿ, ಇವರೆಲ್ಲ ಹೇಳುವ ಕಾರಣಗಳಿಂದಾಗಿಯೇ ಅಪಾಯಕಾರಿ ನಿಜ. ಆದರೆ ಇವರು ಬೇಷರತ್ತಾಗಿ ಬೆಂಬಲಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಇಂದು ಏಕವ್ಯಕ್ತಿ ಪಕ್ಷವಾಗುತ್ತಿದೆಯಾದರೆ, ಕಾಂಗ್ರೆಸ್ ಇಂದು ಏನಾಗಿದೆ ಎಂದು ಇವರು ವರ್ಣಿಸುವರೋ? ಏಕವ್ಯಕ್ತಿ ಪಕ್ಷವಾಗಿ ಬಿಜೆಪಿ ಉಂಟು ಮಾಡುವ ಅಪಾಯಗಳನ್ನು ನಾವಿನ್ನೂ ಕಾದು ನೋಡಬೇಕಾಗಿದೆ.
ಆದರೆ ಇಂದು ಒಂದು ಕುಟುಂಬದ ಪದತಲದಲ್ಲಿ ಬಿದ್ದು ಒದ್ದಾಡುತ್ತಿರುವ ಕಾಂಗ್ರೆಸ್ ಇವರ ಕಣ್ಣಿಗೆ ದೊಡ್ಡ ಪ್ರಜಾಪ್ರಭುತ್ವವಾದಿ ಪಕ್ಷವಾಗಿ ಕಾಣುತ್ತಿದೆಯೇ? ಈ ಪಕ್ಷದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿ, ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ, ಅಣು ನೀತಿ, ಇವೆಲ್ಲವುಗಳ ಪರಿಣಾಮವಾಗಿಯೇ ಅದು ಮುಳುಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇವರು ಬೆಂಬಲಿಸುವರೇ?
ತಮ್ಮ ಈ ಎಲ್ಲ ವಿರೋಧಾಭಾಸಗಳನ್ನು ಮರೆಮಾಚಿಕೊಳ್ಳುವ ತಂತ್ರವಾಗಿ ಇವರೆಲ್ಲ, ಮೋದಿ ಪ್ರತ್ಯಕ್ಷವಾಗುವವರೆಗೆ ಫ್ಯಾಸಿಸ್ಟ್ ಪಕ್ಷವೆಂದು ದೂಷಿಸುತ್ತಿದ್ದ ಬಿಜೆಪಿಯ ಅಳಿವು ಉಳಿವಿನ ಬಗ್ಗೆ ಕಣ್ಣೀರುಗರೆಯುತ್ತಿರುವುದನ್ನೂ ಮತ್ತು ಈವರೆಗೆ ಅನುಮಾನಾಸ್ಪದ ವ್ಯಕ್ತಿಗಳೆಂದು ಕರೆಯುತ್ತಿದ್ದ ವಾಜಪೇಯಿ ಮತ್ತು ಅಡ್ವಾಣಿ ಅವರ ಬಗ್ಗೆ ಉದಾರ ಮಾತುಗಳನ್ನು ಆಡುತ್ತಿರುವುದನ್ನೂ ನೋಡಿದರೆ ಇವರ ವಾದದ ವಿಶ್ವಾಸಾರ್ಹತೆಯ ಬಗ್ಗೆಯೇ ಜನತೆಗೆ ಅನುಮಾನ ಹುಟ್ಟಿದರೆ ಆಶ್ಚರ್ಯವಿಲ್ಲ.
ಇನ್ನು ಇವರ ಇಂತಹ ವಾದಗಳಿಂದ, ನಿರ್ದಿಷ್ಟವಾಗಿ ಬಿಜೆಪಿ ಮತ್ತು ಮೋದಿಯವರ ಬಗ್ಗೆ ಸತ್ಯಾಂಶಗಳನ್ನೇ ಒಳಗೊಂಡಿರುವ ದೇವನೂರ ಮಹಾದೇವ ಅವರ ಬರಹದಿಂದ (ಪ್ರ.ವಾ., ಏ.೧೦) ಸಹಜವಾಗಿಯೇ ತಡಬಡಾಯಿಸಿ ಹೋಗಿರುವ ಬಿಜೆಪಿ ಪರ ವಕ್ತಾರರಂತೆ ಕಾಣುವ ವಾದಿರಾಜ ಮತ್ತು ಬಿ.ವಿ. ಅರುಣ್ ಕುಮಾರ್ರ ಪತ್ರಗಳಲ್ಲಿನ (ಸಂಗತ: ಏ. ೧೪) ಮಾತು ಕೇವಲ ಬಡಬಡಿಕೆಯಂತಿದ್ದು ಇವರ ವಿರೋಧಿ ವಾದಕ್ಕಿಂತ ಹೆಚ್ಚು ಕರುಣಾಜನಕವಾಗಿದೆ. ದೇವನೂರರ ಮಾತುಗಳಿಗೆ ನೇರ ಉತ್ತರ ಕೊಡಲಾಗದ ಇವರು ಮುಖ್ಯ ವಿಷಯಕ್ಕೆ ಸಂಬಂಧಪಡದೇ ಇರುವ ಮಾಹಿತಿಯನ್ನೆಲ್ಲ ಒಟ್ಟಿ, ಯಾರಿಗೂ ಅರ್ಥವಾಗದ ಗೊಣಗಾಟ ನಡೆಸಿದ್ದಾರೆ.
ಇವರ ಅಸಂಬದ್ಧತೆಗೆ, ಅಸಹಾಯಕತೆಗೆ ಒಂದು ನಿದರ್ಶನವೆಂದರೆ ಅರುಣ್ಕುಮಾರ್ ಅವರು, ೧೯೬೩ರಲ್ಲಿ ರಾಮ ಮನೋಹರ ಲೋಹಿಯಾ ಕೊನೆಗೂ ಜನಸಂಘದ ನೆರವಿನೊಂದಿಗೆ ಸಂಸತ್ ಪ್ರವೇಶಿಸಬೇಕಾಯಿತು ಎಂದು ಬರೆದಿರುವುದು. ಇದು, ಸತ್ಯವನ್ನು ತಿರುಚುವುದೇ ಆಗಿದೆ. ನೆಹರೂ ಆಡಳಿತದ ಪ್ರಬಲ ವಿರೋಧಿಯಾಗಿದ್ದ ಲೋಹಿಯಾ ೧೯೬೨ರ ಚೀನಾ ಯುದ್ಧದಲ್ಲಿ ಭಾರತಕ್ಕೆ ಆದ ಮುಖಭಂಗದಿಂದ ಎಷ್ಟು ವಿಚಲಿತರಾದರೆಂದರೆ, ಕಾಂಗ್ರೆಸ್ಸನ್ನು ಭಾರತದ ರಾಜಕಾರಣದಿಂದ ಹಿಮ್ಮೆಟ್ಟಿಸದ ಹೊರತು ಭಾರತಕ್ಕೆ ಮುಕ್ತಿ ಇಲ್ಲವೆಂದು ನಿಶ್ಚಯಿಸಿದರು.
ಅದರ ಭಾಗವಾಗಿ, ಆಗ ನಡೆಯಲಿದ್ದ ಮೂರು ಲೋಕಸಭಾ ಉಪಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳ ಸಹಕಾರ ಕೋರಿದರು. ಏಕೆಂದರೆ ಅಂದು ಕಾಂಗ್ರೆಸ್ಸನ್ನು ಪರಿಣಾಮಕಾರಿಯಾಗಿ ಸೋಲಿಸಲು ಏಕಾಂಗಿಯಾಗಿ ಯಾವೊಂದು ಪಕ್ಷಕ್ಕೂ ಸಾಧ್ಯವಿರಲಿಲ್ಲ.
ಹಾಗಾಗಿ ಲೋಹಿಯಾ ಸ್ವತಃ ತಾವು, ಗಾಂಧಿವಾದಿ ಆಚಾರ್ಯ ಕೃಪಲಾನಿ ಮತ್ತು ಜನಸಂಘದ ದೀನದಯಾಳು ಉಪಾಧ್ಯಾಯ ಅವರು ಆ ಮೂರು ಉಪಚುನಾವಣೆಗಳಿಗೆ ಪರಸ್ಪರ ಹೊಂದಾಣಿಕೆಯ ಅಭ್ಯರ್ಥಿಗಳಾಗಿ ನಿಂತು ಮೂರೂ ಸ್ಥಾನಗಳಲ್ಲಿ ಜಯ ಗಳಿಸಿದರು. ಈ ಪರಸ್ಪರ ಹೊಂದಾಣಿಕೆಯ ಉಪಚುನಾವಣೆಯಲ್ಲಿಯೂ ಜನಸಂಘ ಹೇಗೆ ತನಗೆ ಮೋಸ ಮಾಡಿತೆಂಬುದನ್ನೂ ಲೋಹಿಯಾ ಒಂದೆಡೆ ದಾಖಲಿಸಿದ್ದಾರೆ. ಆದರೆ ಇದನ್ನು, ಕೊನೆಗೂ ಲೋಹಿಯಾ ಸಂಸತ್ತನ್ನು ಪ್ರವೇಶಿಸಿದ್ದು ಜನಸಂಘದ ಸಹಾಯದಿಂದ ಎಂದು ಹೇಳುವುದು ಸತ್ಯದ ವಿಕೃತಿಯಷ್ಟೆ.
ಈ ಎರಡೂ ಕಡೆಯವರ ವಾದಗಳು ಸೂಚಿಸುವುದೇನೆಂದರೆ, ದೇಶವನ್ನು ಎರಡು ಶಾಶ್ವತ ರಾಜಕೀಯ ಶನಿಗಳಿಂದ ಮುಕ್ತಗೊಳಿಸಲು ನಮ್ಮ ಬುದ್ಧಿಜೀವಿಗಳು, ಅಭಿಪ್ರಾಯ ಮುಖಂಡರು ಸಿದ್ಧರಿಲ್ಲವೆಂಬುದು. ಅದಕ್ಕೆ ಅವಕಾಶವೊಂದು ಸೃಷ್ಟಿಯಾಗಿರುವಾಗಲೂ. ಖಾಲಿ ಸಮಯಗಳಲ್ಲೆಲ್ಲಾ ಆಮ್ ಆದ್ಮಿ ಪಕ್ಷದ ಪರವಾಗಿ ಬರೆಯುವ, ಮಾತಾಡುವ ಮತ್ತು ಸಿಂಪಥಿ ಇದೆ ಎಂದು ಹೇಳುವ ಇವರು ನಿರ್ಣಾಯಕ ಸಂದರ್ಭದಲ್ಲಿ ಅದನ್ನೇಕೆ ಉಳಿಸಿ ಬೆಳೆಸಲು ಮನಸ್ಸು ಮಾಡುತ್ತಿಲ್ಲ? ಅದು ಬೆಳೆದ ಮೇಲೆ ಅದನ್ನು ಬೆಂಬಲಿಸಲು ಇವರು ಮುಂದೆ ಬರುವರೋ?
ಬಿಜೆಪಿ ಇಂದು ಮೋದಿ ರೂಪದಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿದೆ ಎಂದು ಹೇಳುವ ಈ ಬುದ್ಧಿಜೀವಿಗಳು ಅದಕ್ಕೆ ಮೂಲ ಕಾರಣ ಕಾಂಗ್ರೆಸ್ಸಿನ ನಿಲ್ಲದ ದುಷ್ಟ ಮತ್ತು ಭ್ರಷ್ಟ ರಾಜಕಾರಣ ಎಂದು ಯೋಚಿಸಲಾಗದಿರುವಷ್ಟು ನಿಶ್ಚೇಷ್ಟಿತರಾಗುವುದಕ್ಕೆ ಏನು ಕಾರಣ? ದೀರ್ಘಕಾಲಿಕವಾಗಿ ಯೋಚಿಸಲು ನಿರಾಕರಿಸುತ್ತಾ ಸದಾ ತತ್ಕಾಲೀನ ಭಯಗಳ ನೆರಳಿನಲ್ಲೇ ತಮ್ಮ ವಾದ ಮಂಡಿಸುತ್ತಾ ಜನರನ್ನು ನಿಶ್ಚಲಗೊಳಿಸುವವರನ್ನು ನಿಜವಾಗಿ ಬುದ್ಧಿಜೀವಿಗಳೆಂದು ಕರೆಯಬಹುದೇ? ಜನ ಯೋಚಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.