ಕೋಲ್ಕತ್ತ (ಐಎಎನ್ಎಸ್): ಜಾಣ್ಮೆಯ ಆಟ ಪ್ರದರ್ಶಿಸಿದ ಭಾರತ ತಂಡದವರು ಹಂಗೇರಿಯಲ್ಲಿ ನಡೆದ 16 ವರ್ಷದೊಳಗಿನವರ ಚೆಸ್ ಒಲಿಂಪಿಯಾಡ್ನಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಹತ್ತು ಸುತ್ತುಗಳನ್ನೊಳಗೊಂಡ ಟೂರ್ನಿಯಲ್ಲಿ ಅರವಿಂದ್ ಚಿದಂ ಬರಂ, ಮುರಳಿ ಕಾರ್ತಿಕೇಯನ್, ದೀಪ್ತಯನ್ ಘೋಷ್, ಕುಮಾರನ್ ಬಾಲಾಜಿ ಮತ್ತು ಜಿ.ಕೆ.ಮೋನಿಷ್ ಅವರಿದ್ದ ತಂಡ ಈ ಸಾಧನೆ ಮಾಡಿದೆ. ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದ ರಷ್ಯಾ ಮತ್ತು ಇರಾನ್ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿ ಕೊಂಡವು.
ಅರವಿಂದ್ ಚಿದಂಬರಂ ಒಂಬತ್ತು ಸುತ್ತುಗಳಿಂದ ಎಂಟು ಪಾಯಿಂಟ್ ಗಳಿಸಿ ಎರಡನೇ ಸ್ಥಾನ ಪಡೆದರೆ, ಮುರಳಿ ಕಾರ್ತಿಕೇಯನ್ ಹತ್ತು ಸುತ್ತುಗಳಿಂದ ಇಷ್ಟೇ ಪಾಯಿಂಟ್ ಸಂಗ್ರಹಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ದೀಪ್ತಯನ್ ಘೋಷ್ ಮತ್ತು ಕುಮಾರನ್ ಬಾಲಾಜಿ ಒಂಬತ್ತು ಸುತ್ತುಗಳಿಂದ ಕ್ರಮವಾಗಿ 5.5 ಮತ್ತು 4.5 ಪಾಯಿಂಟ್ ಗಳಿಸಿ ದರೆ, ಜಿ.ಕೆ.ಮೋನಿಷ್ ಮೂರು ಸುತ್ತುಗಳಿಂದ 0.5 ಪಾಯಿಂಟ್ ಕಲೆಹಾಕಿದರು.