ಬೆಂಗಳೂರು: ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಎಲ್ಸಿಡಿಎ) ಅಧೀನದಲ್ಲಿರುವ ಒಂದು ಸಾವಿರ ಕೆರೆಗಳ ಭೂಬಳಕೆ ಪರಿವರ್ತನೆ ಮಾಡಲು ಇನ್ನು ಮುಂದೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು!
ಕೆರೆ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹೊರಡಿಸಿರುವ ಆದೇಶ ಪಾಲಿಸಲು ಮೊದಲ ಹೆಜ್ಜೆ ಇಟ್ಟಿರುವ ಪ್ರಾಧಿಕಾರ, ಮೊದಲ ಹಂತದಲ್ಲಿ ನಗರದ 34 ಕೆರೆಗಳ ಜೌಗು ಪ್ರದೇಶಗಳನ್ನು ಗುರುತಿಸಿ ಪರಿಸರ ಮತ್ತು ಜೀವಿಪರಿಸ್ಥಿತಿಶಾಸ್ತ್ರ ಇಲಾಖೆಗೆ ವರದಿ ಸಲ್ಲಿಸಿದೆ.
ಎರಡನೇ ವರದಿಯನ್ನು 10 ದಿನಗಳಲ್ಲಿ ಸಲ್ಲಿಸಲು ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲಿ ಸುಮಾರು 89 ಕೆರೆಗಳ ಮಾಹಿತಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
‘ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾವಿರ ಕೆರೆಗಳು ಇವೆ. 11 ಪಾಲಿಕೆಗಳು ಪ್ರಾಧಿ ಕಾರದ ವ್ಯಾಪ್ತಿಗೆ ಬರುತ್ತವೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಕೆರೆಗಳು ಇವೆ.
ಆರಂಭಿಕ ಹಂತದಲ್ಲಿ ಈ ನಗರಗಳ ಕೆರೆಗಳ ಅಧ್ಯಯನ ನಡೆಸಿ ವರದಿ ಸಿದ್ಧ ಪಡಿಸಲಾಗುತ್ತದೆ. ಎರಡನೇ ಹಂತದಲ್ಲಿ ಮಂಗಳೂರು, ಮೈಸೂರು ಮತ್ತಿತರ ಪಾಲಿಕೆಗಳ ವ್ಯಾಪ್ತಿಯ ಕೆರೆಗಳ ಅಧ್ಯ ಯನ ನಡೆಸಲಾಗುತ್ತದೆ. ವರ್ಷದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಜಿ. ವಿದ್ಯಾಸಾಗರ್ ತಿಳಿಸುತ್ತಾರೆ.
‘ಹಸಿರು ನ್ಯಾಯಮಂಡಳಿಯ ಮಾರ್ಗಸೂಚಿಯ ಪ್ರಕಾರ ಈ ಕಾರ್ಯ ಮಾಡಲಾಗುತ್ತಿದೆ. ಈ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಕೆರೆಗಳ ಭೂಬಳಕೆ ಪರಿವರ್ತನೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡುತ್ತಾರೆ.
‘ಬಿಲ್ಡರ್ಗಳ ಕಣ್ಣು ಬಿದ್ದು ಬೆಂಗಳೂರಿನಲ್ಲಿ ನೂರಾರು ಕೆರೆಗಳು ಮೂಲಸ್ವರೂಪ ಕಳೆದುಕೊಂಡಿವೆ. ಸುಮಾರು 40 ಕೆರೆಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆಗಳನ್ನು ನಿರ್ಮಿಸಿದೆ. 10ಕ್ಕೂ ಅಧಿಕ ಕೆರೆಗಳ ಅಂಚಿನಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ಕೆಲವು ಅಧಿ ಕಾರಿಗಳ ನೆರವು ಪಡೆದು ಕೆರೆಯಂಗಳ ದಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಭವಿಷ್ಯದಲ್ಲಿ ಕೆರೆಯಂಚಿನಲ್ಲಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ’ ಎಂದು ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ಪ್ರಾಧಿಕಾರ ಈವರೆಗೆ ಕೆರೆ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಂಡಿ ರಲಿಲ್ಲ. ಈಗ ಮುಂದಡಿ ಇಟ್ಟಿರುವುದು ಉತ್ತಮ ಬೆಳವಣಿಗೆ’ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆಯ ಸಂಚಾಲಕ ಈಶ್ವರಪ್ಪ ಮಡಿವಾಳಿ ಅಭಿಪ್ರಾಯಪಡುತ್ತಾರೆ.
ಎನ್ಜಿಟಿ ಆದೇಶದಲ್ಲಿ ಏನಿತ್ತು: ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮೇ 4ರಂದು ಆದೇಶ ಹೊರಡಿಸಿತ್ತು.
ಕೆರೆಗಳ ಬಫರ್ ಜೋನ್ 75 ಮೀಟರ್ ಇರಬೇಕು. ಪ್ರಾಥಮಿಕ ರಾಜ ಕಾಲುವೆಗಳ ಬಫರ್ ಜೋನ್ 50 ಮೀಟರ್, ದ್ವಿತೀಯ ಹಂತದ ರಾಜ ಕಾಲುವೆಗಳ ಬಫರ್ ಜೋನ್ 35 ಮೀಟರ್, ತೃತೀಯ ಹಂತದ ಕಾಲು ವೆಗಳ ಬಫರ್ ಜೋನ್ 25 ಮೀಟರ್ ಇರಬೇಕು.
ಇಲ್ಲಿ ನಿರ್ಮಾಣ ಚಟುವ ಟಿಕೆಗೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿತ್ತು. ಸಂಬಂಧಿತ ಇಲಾ ಖೆಗಳು ನಾಲ್ಕು ವಾರಗಳಲ್ಲಿ ಇದನ್ನು ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.