ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ‘ರೈತ ವಿರೋಧಿ ಮಸೂದೆ’ ಎಂದು ಟೀಕಿಸಿರುವ ಸಿಪಿಐ, ಮಸೂದೆಯನ್ನು ವಿರೋಧಿಸಿ ಮೇ14ರಂದು ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆಯ ಅಂಗವಾಗಿ ಸಿಪಿಐನ ಹಿರಿಯ ನಾಯಕರು ದೆಹಲಿಯ ಜಂತರ್ಮಂತರ್ನಲ್ಲಿ ರ್ಯಾಲಿ ನಡೆಸಲಿದ್ದು, ಜತೆಗೆ ದೇಶದ ಇತರೆ ಭಾಗಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ತಿಳಿಸಿದೆ.
‘ಪ್ರತಿಭಟನೆಯ ಮೂಲಕ ರೈತ ವಿರೋಧಿ ಮಸೂದೆಗೆ ಸಾಂಕೇತಿಕವಾಗಿ ನಮ್ಮ ವಿರೋಧ ವ್ಯಕ್ತಪಡಿಸುತ್ತೇವೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ್ ರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಪ್ರತಿಭಟನೆಗೆ ಕೇರಳ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಹೆಚ್ಚಿನ ಬೆಂಬಲ ನಿರೀಕ್ಷಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
‘ನಮ್ಮ ಪಕ್ಷ ಕೈಗಾರಿಕೆಗಳ ವಿರುದ್ಧವಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗಲಿದೆಯೇ ಎಂಬುದನ್ನು ತಿಳಿಯುವುದಷ್ಟೇ ನಮ್ಮ ಉದ್ದೇಶ’ ಎಂದು ಅವರು ಹೇಳಿದ್ದಾರೆ.