ಚಿಕ್ಕಮಗಳೂರು/ ಮಂಗಳೂರು: ಚಿಕ್ಕಮಗಳೂರು– ಸಕಲೇಶಪುರ ನೂತನ ಬ್ರಾಡ್ಗೇಜ್ ರೈಲು ಮಾರ್ಗದ 47 ಕಿ.ಮೀ. ಕಾಮಗಾರಿಗೆ ಭಾನುವಾರ ಚಿಕ್ಕಮಗಳೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬಳಿಕ ಮಂಗಳೂರಿನಲ್ಲಿ ಮೂರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.
ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಶೇ 50:50 ಅನುದಾನದ ಸಹಭಾಗಿತ್ವದಲ್ಲಿ ಚಿಕ್ಕಮಗಳೂರು– ಸಕಲೇಶಪುರ ರೈಲು ಮಾರ್ಗ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ. ಮೂರು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಹೊಸ ಮಾರ್ಗಕ್ಕೆ ರಾಜ್ಯ ತನ್ನ ಪಾಲಿನ ₨ 352 ಕೋಟಿ ಮತ್ತು ಯೋಜನೆಗೆ ಅಗತ್ಯವಿರುವ ಉಚಿತ ಭೂಮಿ ಒದಗಿಸಲಿದೆ. ರೈಲ್ವೆ ₨ 292 ಕೋಟಿ ಅನುದಾನ ಭರಿಸಲಿದೆ. ಈ ಯೋಜನೆಗೆ ಒಟ್ಟು ₨ 644 ಕೋಟಿ ವೆಚ್ಚವಾಗಲಿದೆ ಎಂದರು.
ಸಚಿವರು ಸಂಜೆ ಮಂಗಳೂರಿನ ಸೆಂಟ್ರಲ್ ನಿಲ್ದಾಣದಲ್ಲಿ ಮಂಗಳೂರು–ಮಡಗಾಂವ್ ಇಂಟರ್ಸಿಟಿ, ಮಂಗಳೂರು–ಕಾಚಿಗುಡ ಎಕ್್ಸಪ್ರೆಸ್ ಮತ್ತು ಮಂಗಳೂರು–ಭಟ್ಕಳ ‘ಡೆಮು’ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.
‘ಕರಾವಳಿ ಭಾಗಕ್ಕೆ ಇನ್ನಷ್ಟು ಪ್ರಯಾಣಿಕ ರೈಲುಗಳ ಸೇವೆ ಒದಗಿಸುವ ಉದ್ದೇಶ ಕೇಂದ್ರಕ್ಕೆ ಇದ್ದರೂ ರೈಲ್ವೆ ಹಳಿಗಳ ಸುರಕ್ಷತಾ ಆಯೋಗದ ಒಪ್ಪಿಗೆ ಅಗತ್ಯವಿದೆ. ಮಂಗಳೂರು–ಬೆಂಗಳೂರು ನಡುವೆ ಎರಡಕ್ಕಿಂತ ಹೆಚ್ಚು ರೈಲು ಓಡಿಸುವುದಕ್ಕೆ ಸುರಕ್ಷತಾ ಸಮಿತಿ ಒಪ್ಪಿಗೆ ನೀಡದೇ ಇರುವುದರಿಂದ ಹೆಚ್ಚಿನ ರೈಲು ಸೇವೆ ಕಲ್ಪಿಸುವುದು ಸಾಧ್ಯವಾಗಿಲ್ಲ. ಆದರೆ ಸಮಿತಿ ನಿರ್ಣಯ ಪುನರ್ ಪರಿಶೀಲಿಸುವಂತೆ ಸುರಕ್ಷತಾ ಆಯೋಗಕ್ಕೆ ಪತ್ರ ಬರೆಯಲಾಗಿದೆ’ ಎಂದು ಖರ್ಗೆ ಅವರು ತಿಳಿಸಿದರು.
ಹೊಸ ರೈಲುಗಳ ವೇಳಾಪಟ್ಟಿ
ಮಂಗಳೂರು ಸೆಂಟ್ರಲ್– ಮಡಗಾಂವ್ ಇಂಟರ್ಸಿಟಿ ಎಕ್ಸ್ಪ್ರೆಸ್ (22635) ಬೆಳಿಗ್ಗೆ 8.15ಕ್ಕೆ ಹೊರಡಲಿದ್ದು ಮಡಗಾಂವ್ಗೆ ಮಧ್ಯಾಹ್ನ 2ಕ್ಕೆ ತಲುಪಲಿದೆ. ಮಡಗಾಂವ್ ನಿಂದ ಸಂಜೆ 4.15ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 10ಕ್ಕೆ ತಲುಪಲಿದೆ. ಭಾನುವಾರ ಸಂಚರಿಸುವುದಿಲ್ಲ.
ಮಂಗಳೂರು ಸೆಂಟ್ರಲ್– ಕಾಚಿಗುಡ ಎಕ್ಸ್ಪ್ರೆಸ್ (17605) ಪ್ರತಿ ಬುಧವಾರ ಮತ್ತು ಶನಿವಾರ ರಾತ್ರಿ 8ಕ್ಕೆ ಹೊರಡಲಿದೆ. ಕಾಚಿಗುಡಕ್ಕೆ ಶುಕ್ರವಾರ ಮತ್ತು ಸೋಮವಾರ ನಸುಕಿನ 3.40ಕ್ಕೆ ತಲುಪಲಿದೆ. ಈ ರೈಲು ಕಾಟ್ಪಾಡಿ ಮೂಲಕ ಸಂಚರಿಸಲಿದೆ.
ಕಾಚಿಗುಡ– ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (17606) ಕಾಚಿಗುಡದಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ. ಮಂಗಳೂರಿಗೆ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 11.20ಕ್ಕೆ ತಲುಪಲಿದೆ.
ಮಂಗಳೂರು ಸೆಂಟ್ರಲ್– ಭಟ್ಕಳ ‘ಡೆಮು’ ರೈಲು (70105) ಮಂಗಳೂರಿನಿಂದ ಬೆಳಿಗ್ಗೆ 11ಕ್ಕೆ ಹೊರಟು ಭಟ್ಕಳಕ್ಕೆ ಮಧ್ಯಾಹ್ನ 2.40ಕ್ಕೆ ತಲುಪಲಿದೆ. ಭಟ್ಕಳದಿಂದ ಸಂಜೆ 6ಕ್ಕೆ ಹೊರಟು ರಾತ್ರಿ 10.25ಕ್ಕೆ ಮಂಗಳೂರು ತಲುಪಲಿದೆ. ಭಾನುವಾರ ಸಂಚಾರ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.