ಟೆಹರಾನ್(ಎಎಫ್ಪಿ): ಇನ್ನೇನು ನೇಣಿಗೇರಬೇಕಾಗಿದ್ದ ಮಗನ ಕೊಲೆಗಾರನನ್ನು ತಾಯಿಯೇ ರಕ್ಷಿಸಿದ ಅಪರೂಪದ ಘಟನೆ ಇರಾನ್ನಲ್ಲಿ ನಡೆದಿದೆ.
೨೦೦೭ರಲ್ಲಿ ನಡೆದ ಬೀದಿ ಕಾಳಗದಲ್ಲಿ ಬಲಾಲ್ ಎಂಬಾತ ಅಬ್ದುಲ್ಲಾ ಹುಸೇನ್ ಜಾದ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಆರೋಪಕ್ಕಾಗಿ ಬಲಾಲ್ನನ್ನು ಮಂಗಳವಾರ ಬೆಳಿಗ್ಗೆ ಸಾರ್ವಜನಿಕವಾಗಿ ನೇಣಿಗೇರಿಸಲು ಸಿದ್ಧತೆ ಮಾಡಲಾಗಿತ್ತು.
ಆದರೆ ಆ ವೇಳೆಗೆ ಅಲ್ಲಿ ಬಂದ ಹುಸೇನ್ ತಾಯಿ ಸಮೆರಾ ಅಲಿನೆಜಾದ್, ‘ಮಕ್ಕಳಿಲ್ಲದ ಮನೆಯಲ್ಲಿ ಬದುಕುವುದು ಎಷ್ಟು ಕಷ್ಟ ಎನ್ನುವುದು ನಿಮಗೆ ಗೊತ್ತಾ’ ಎಂದು ಅಲ್ಲಿ ಸೇರಿದ್ದ ಜನಸ್ತೋಮವನ್ನು ಕೇಳಿದರು. ನಂತರ ಭಾವೋದ್ವೇಗದಿಂದ ಬಲಾಲ್ ಕೆನ್ನೆಗೆ ಹೊಡೆದು ಆತನ ಕೊರಳಲ್ಲಿದ್ದ ಕುಣಿಕೆಯನ್ನು ಕಳಚಿದರು.
‘ನನಗೆ ನಂಬಿಕೆ ಇದೆ. ನನ್ನ ಪುತ್ರ ಕನಸಿನಲ್ಲಿ ಬಂದು ಅಮ್ಮಾ ನಾನು ಇಲ್ಲಿ ಶಾಂತಿಯಿಂದ ಇದ್ದೇನೆ ಎಂದಿದ್ದ. ಇದಾದ ಬಳಿಕ ನನ್ನ ತಾಯಿ ಸೇರಿದಂತೆ ಎಲ್ಲ ಬಂಧುಗಳು ನನ್ನ ಪುತ್ರನನ್ನು ಕೊಲೆ ಮಾಡಿದ ಆರೋಪಿಯನ್ನು ಕ್ಷಮಿಸುವಂತೆ ಒತ್ತಾಯಿಸಿದರು.’
‘ಜೀವದಾನ ನೀಡಿ ಎಂದು ಆರೋಪಿ ಕೂಗಿಗೊಳ್ಳುತ್ತಿದ್ದ. ನಾನು ಆತನ ಕೆನ್ನೆಗೆ ಬಾರಿಸಿದೆ. ಆಗ ನನಗೆ ಸಮಾಧಾನವಾಯಿತು. ಈಗ ನಾನು ಅವನನ್ನು ಕ್ಷಮಿಸಿದ್ದೇನೆ. ನನ್ನಲ್ಲಿ ನಿರಾಳ ಭಾವ ಮನೆ ಮಾಡಿದೆ’ ಎಂದು ಸಮೆರಾ ಅಲಿನೆಜಾದ್ ಹೇಳಿದರು.