ಕನ್ನಡ ಕಿರುತೆರೆಯ ಧಾರಾವಾಹಿ ‘ಗುಡ್ಡದ ಭೂತ’ವನ್ನು ಜೀ ಕನ್ನಡ ವಾಹಿನಿ ಮರುಪ್ರಸಾರ ಮಾಡುತ್ತಿದೆ. ಈ ಧಾರಾವಾಹಿಗೆ ಈಗ ಡಿ.ಎ. ತಂತ್ರಜ್ಞಾನದ ಮೂಲಕ ಕಲರ್ ಕರೆಕ್ಷನ್ ಮಾಡಲಾಗಿದ್ದು, ಮತ್ತಷ್ಟು ಆಕರ್ಷಕವಾಗಿ ಕಿರುತೆರೆಯಲ್ಲಿ ಮೂಡಿಬರಲಿದೆ.
ತೊಂಬತ್ತರ ದಶಕದಲ್ಲಿ ಪ್ರಸಾರವಾಗಿದ್ದ ‘ಗುಡ್ಡದ ಭೂತ’ ಧಾರಾವಾಹಿ ತುಂಬ ಜನಪ್ರಿಯವಾಗಿತ್ತು. ಇಂದು ಸಿನಿಮಾ ಜಗತ್ತಿನಲ್ಲಿ ಖ್ಯಾತರಾಗಿರುವ ಅನೇಕರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ ಧಾರಾವಾಹಿ ಇದು. ಗಿರೀಶ್ ಕಾಸರವಳ್ಳಿ, ಸದಾನಂದ ಸುವರ್ಣ ಹಾಗೂ ಜಿ.ಎಸ್.ಭಾಸ್ಕರ್ ಅವರಂತಹ ಪ್ರತಿಭಾವಂತರು ಈ ಧಾರಾವಾಹಿಗಾಗಿ ಕೆಲಸ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಕಲಾಪ್ರಪಂಚದಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಈ ಧಾರಾವಾಹಿ ನೆರವಾಗಿತ್ತು.
೧೩ ಸಂಚಿಕೆಗಳ ಈ ಧಾರಾವಾಹಿ ಕನ್ನಡಿಗರ ಭಾವನೆಗಳಿಗೆ ಸದಾ ಸ್ಪಂದಿಸುವ ಧಾರಾವಾಹಿಗಳಲ್ಲೊಂದು. ಬಿ.ಆರ್.ಛಾಯಾ ಅವರು ಹಾಡಿರುವ ‘ಡೆನ್ನಾಣ ಡೆನ್ನಾಣ’ ಎಂಬ ಶೀರ್ಷಿಕೆ ಗೀತೆ ಸಹ ಅಂದು ತುಂಬಾ ಜನಪ್ರಿಯವಾಗಿತ್ತು. ಡಿಸೆಂಬರ್ ೩೦ರಿಂದ ಪ್ರಸಾರಗೊಳ್ಳುತ್ತಿರುವ ಈ ಧಾರಾವಾಹಿ ಪ್ರತಿ ರಾತ್ರಿ ೭.೩೦ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.