ಗಂಗಾವತಿ: ನಗರದ ಇಂದಿರಾ (ಜುಲಾಯಿನಗರ) ವೃತ್ತದಲ್ಲಿರುವ ಜನತಾ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆ ಮತ್ತು ಕಾಲೇಜು ಆವರಣದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ. ರಾಜಾ ಭೇಟಿ ನೀಡಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದರು.
ಸಂಸ್ಥೆ ಆವರಣದಲ್ಲಿರುವ ವಿವಿಧ ಕೊಠಡಿಗಳನ್ನು ಪರಿಶೀಲಿಸಿದ ಎಸ್ಪಿ, ಕೊಠಡಿಯ ಹೊರಭಾಗದಿಂದ ವ್ಯಕ್ತಿಗಳು ನುಸಳದಂತೆ ಕ್ರಮ ಕೈಗೊಳ್ಳಬೇಕು, ಸಂಸ್ಥೆಯ ಪಕ್ಕದಲ್ಲಿರುವ ಖಾಸಗಿ ವ್ಯಕ್ತಿಯ ನಿವೇಶನದಲ್ಲಿ ಸಾರ್ವಜನಿಕ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಸೂಚನೆ ನೀಡಿದರು.
ಭದ್ರತೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಮತ ಎಣಿಕೆಯ ಕೊಠಡಿ ಮತ್ತು ಮತಪೆಟ್ಟಿಗೆ ಇರಿಸುವ ಸ್ಟ್ರಾಂಗ್ ರೂಂ ಕಿಟಕಿ, ಬಾಗಿಲುಗಳನ್ನು ಒಮ್ಮೆ ಸಂಪೂರ್ಣ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿ ಮಾಡಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ವೆಂಕನಗೌಡ ಪಾಟೀಲ್ ಅವರಿಗೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ, ಭಗತ್ಸಿಂಗ್ ನಗರದಿಂದ ಜೆಎಸ್ಎಸ್ ಕಾಲೇಜು ಮಾರ್ಗವಾಗಿ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಜೂನ್ 4ರಂದು ಸಾರ್ವಜನಿಕ ಓಡಾಟ ನಿಷೇಧಿಸಲಾಗುವುದು. ಬ್ಯಾರಿಕೇಡ್ ಗಳನ್ನಿಟ್ಟು ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಯೊಂದಿಗೆ ಕೇವಲ ಒಬ್ಬ ಏಜೆಂಟನಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮತ ಎಣಿಕೆ ಪ್ರಕ್ರಿಯೆ ಬೆಳಗ್ಗೆ ಏಳರಿಂದ ಆರಂಭವಾಗಿ ಸಂಜೆ ಎಂಟು ಗಂಟೆಯವರೆಗೂ ನಡೆಯಲಿದೆ. ಮೊದಲಿಗೆ ಒಂದು, ಎರಡು ಅಭ್ಯರ್ಥಿಗಳಿರುವ ಕ್ಷೇತ್ರಗಳಿಗೆ ಎಣಿಕೆ ನಡೆಯಲಿದೆ ಎಂದರು.
ಧ್ವನಿವರ್ಧಕದ ಮೂಲಕ ಕ್ಷಣ ಕ್ಷಣದ ಮಾಹಿತಿಯನ್ನು ಮತ ಎಣಿಕೆ ಕೇಂದ್ರದ ಹೊರಗಿರುವ ಸಾರ್ವಜನಿಕರಿಗೆ ಹಾಗೂ ಅಭ್ಯರ್ಥಿಗಳ ಬೆಂಬಲಿಗರಿಗೆ ನೀಡಲಾಗುವುದು. ಎರಡು ಕೆಎಸ್ಆರ್ಪಿ ತುಕಡಿ ಹಾಗೂ ನಾಲ್ಕು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗುವುದು ಎಂದರು.
ತಹಶೀಲ್ದಾರ್ ವೆಂಕನಗೌಡ ಪಾಟೀಲ್, ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಾಳಿಕೃಷ್ಣ, ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ, ಗಂಗಾವತಿ ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಹನುಮರೆಡ್ಡೆಪ್ಪ, ಗಂಗಾವತಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.