ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಮ್ಮ ಪಾತ್ರ ಬಯಲಿಗೆ ಬರುತ್ತದೆಂದು ತೀವ್ರ ಒತ್ತಡಕ್ಕೆ ಒಳಗಾಗಿರುವ ಮಮತಾ ಬ್ಯಾನರ್ಜಿ ‘ಒತ್ತಡ ತಂತ್ರ’ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ವಾದರೆ ಅವರು ಇಷ್ಟು ಒತ್ತಡಕ್ಕೆ ಒಳಗಾಗಬೇಕಿರಲಿಲ್ಲ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ತಿರುಗೇಟು ನೀಡಿದ್ದಾರೆ.
ಹಗರಣದಲ್ಲಿ ತಮ್ಮ ಕೈವಾಡ ಎಲ್ಲಿ ಬೆಳಕಿಗೆ ಬರುವುದೋ ಎಂದು ಒತ್ತಡಕ್ಕೆ ಒಳಗಾಗಿರುವ ಮಮತಾ ಎದೆಗುಂದಿದ್ದಾರೆ. ಆ ಭೀತಿಯಲ್ಲಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಮತ್ತೊಬ್ಬ ವಕ್ತಾರ ಜಿ.ವಿ.ಎಲ್ ನರಸಿಂಹರಾವ್ ಆರೋಪಿಸಿದ್ದಾರೆ.
ಮಮತಾ ಗುಡುಗು: (ಕೋಲ್ಕತ್ತ ವರದಿ) : ‘ಅಧಿಕಾರದ ಮದದಲ್ಲಿ ಹದ್ದು ಮೀರಿ ವರ್ತಿಸಿದರೆ ಪರಿಣಾಮ ಸರಿ ಇರದು. ಬಂಗಾಳದ ಜನತೆ ಎಂದಿಗೂ ಅಪಮಾನ ಸಹಿಸರು. ಅಹಂಕಾರದಿಂದ ನಡೆದುಕೊಂಡರೆ ಅದರ ಪರಿಣಾಮ ಎದುರಿಸಲು ಸಜ್ಜಾಗಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಸಚಿವ ಮಿತ್ರಾ ಬಂಧನ ವಿರೋಧಿಸಿ ಪಶ್ಚಿಮ ಬಂಗಾಳದ ಸಚಿವರು, ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ನೂರಾರು ಕ್ರೀಡಾಪಟುಗಳ ಜತೆ ಶನಿವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಮಿತ್ರಾ ಬಂಧನದ ಹಿಂದೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ನೇರ ಆರೋಪ ಮಾಡಿದ ಅವರು, ಬಿಜೆಪಿಯ ದ್ವೇಷದ ರಾಜಕೀಯಕ್ಕೆ ಮಿತ್ರಾ ಬಲಿಯಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದ ಮಮತಾ, ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸಿಬಿಐ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ; ಸಿಬಿಐನಂತಹ ಸ್ವಾಯತ್ತ ಸಂಸ್ಥೆಯನ್ನು ಕೇಂದ್ರ ಸರ್ಕಾರ ರಾಜಕೀಯ ದಾಳವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
‘ಮದನ್ ಒಬ್ಬ ಡಕಾಯಿತ ಅಥವಾ ಕಳ್ಳ ಅಲ್ಲ. ಶಾರದಾ ಚಿಟ್ ಫಂಡ್ ಹಣವನ್ನು ದುರ್ಬಳಕೆ ಮಾಡಿಕೊಳ್ಳುವಷ್ಟು ಅವರ ಮನೆತನದ ಆರ್ಥಿಕ ಸ್ಥಿತಿ ಹೀನಾಯವಾಗಿಲ್ಲ’ ಎಂದು ಕಿಡಿ ಕಾರಿದರು.
ಮೊದಲು ಸಹಜ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು ದೆಹಲಿಯಿಂದ ಬಂದ ದೂರವಾಣಿ ಕರೆಯ ನಂತರ ಏಕಾಏಕಿ ಮಿತ್ರಾ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಮಮತಾ ದೂರಿದರು.
ಪ್ರಧಾನಿಯನ್ನೂ ಬಂಧಿಸಿ...
ಶಾರದಾ ಚಿಟ್ ಫಂಡ್ ಅಧ್ಯಕ್ಷ ಸುದಿಪ್ತ ಸೆನ್ ಜತೆ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಸಚಿವ ಮದನ್ ಮಿತ್ರಾ ಅವರನ್ನು ಬಂಧಿಸುವುದಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಕಮ್ಯುನಿಸ್ಟ್ ನಾಯಕರನ್ನೂ ಬಂಧಿಸಬೇಕಾಗುತ್ತದೆ. ಸಹಾರಾ ಹಗರಣದ ಆರೋಪಿ ಸುಬ್ರತೊ ರಾಯ್ ಡೈರಿಯಲ್ಲಿ ಮೋದಿ ಅವರ ಹೆಸರೂ ಇದೆ.
- ಮಮತಾ ಬ್ಯಾನರ್ಜಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.