ಬಂಗಾರಪೇಟೆ: ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಪಟ್ಟಣದ ಸಿದ್ಧಾರ್ಥ ನಗರದ ನಿವಾಸಿಗಳು ವಿಶೇಷ ಪೂಜೆ ಸಲ್ಲಿಸಿದರು.
ಜೇಡಿ ಮಣ್ಣಿನಲ್ಲಿ ಮಾಡಿದ್ದ ಮಳೆರಾಯನ ಮೂರ್ತಿ ತಲೆ ಮೇಲೆ ಹೊತ್ತು, ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ‘ಬಾರೊ ಬಾರೊ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಊರಿನ ಬೆಳೆಗೆ ನೀರಿಲ್ಲ’ ಎಂದು ಕೂಗಿ,ಯುವಕರು ಮಳೆರಾಯನ ಸುತ್ತ ಕುಣಿದರು. ಕೆಲ ಸಂದರ್ಭ ಆಕಾಶದತ್ತ ಮುಖ ಮಾಡಿ ಬಾಯಿ ಬಡಿದುಕೊಳ್ಳುತ್ತಿದ್ದರು. ಹಾಗೆ ಮಾಡುವುದರಿಂದ ಮಳೆ ಬರುತ್ತದೆ ಎನ್ನುವುದು ಅವರ ನಂಬಿಕೆ.
ಬಡಾವಣೆಯ ಪ್ರತಿಯೊಂದು ಮನೆಯಲ್ಲಿ ಮಳೆರಾಯನ ಮೇಲೆ ನೀರು ಸುರಿದು ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ನಂತರ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.
ಚಂದ್ರಶೇಖರ್ ರಾವ್ ನೇತೃತ್ವ ವಹಿಸಿದ್ದರು. ಗಣಪತಿ ರಾವ್, ಕುಮಾರ್, ದಯಾನಂದ್, ಚಿಟ್ಟಿಬಾಬು, ಕುಮರೇಶನ್, ಮಹೇಶ್, ಚಲಪತಿ ಇತರರು ಭಾಗವಹಿಸಿದ್ದರು.