ನವದೆಹಲಿ: ಶಿವಸೇನಾ ಮೈತ್ರಿ ಕಡಿದು ಕೊಂಡ ಬಳಿಕ ಬಿಜೆಪಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದು ನಿಜ. ಆದರೆ ‘ಮೋದಿ ಅಲೆ’ಯು ಸಣ್ಣಪುಟ್ಟ ಮಿತ್ರ ಪಕ್ಷಗಳನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದೆ.
ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಆರ್ಪಿಐ (ಅಠಾವಳೆ), ಸ್ವಾಭಿಮಾನ್ ಶೇತ್ಕಾರ್ ಸಂಘಟನ್, ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಶಿವ ಸಂಗ್ರಾಮ ಪಕ್ಷಕ್ಕೆ 30 ಸ್ಥಾನ ಬಿಟ್ಟುಕೊಟ್ಟಿತ್ತು.
ಪುಣೆಯ ದೌಂಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ರಾಹುಲ್ ಸುಭಾಸ್ ರಾವ್ ಕುಲ್ ಮಾತ್ರ ಆಯ್ಕೆಯಾಗಿದ್ದಾರೆ. ಎನ್ಸಿಪಿ ಟಿಕೆಟ್ ನಿರಾಕರಿಸಿದ್ದರಿಂದ ಕೊನೆ ಗಳಿಗೆಯಲ್ಲಿ ರಾಹುಲ್ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಆರ್ಪಿಐಗೆ ದಲಿತರು, ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಗೋಪಾಲಕ ಸಮುದಾಯ (ಗೌಳಿ) ಹಾಗೂ ಸ್ವಾಭಿಮಾನ್ ಶೇತ್ಕಾರ್ ಸಂಘಟನೆಗೆ ರೈತರ ಬೆಂಬಲವಿದ್ದು, ಈ ಸಮುದಾಯಗಳ ಬೆಂಬಲ ಪಡೆಯಲು ಬಿಜೆಪಿ ಈ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸುವ ತಂತ್ರ ರೂಪಿಸಿತ್ತು.