ನವದೆಹಲಿ (ಪಿಟಿಐ): ಬಿಹಾರದ ಸಮಷ್ಟಿಪುರ ರೈಲು ನಿಲ್ದಾಣದಲ್ಲಿ 40 ವರ್ಷಗಳ ಹಿಂದೆ ಆಗಿನ ರೈಲ್ವೆ ಸಚಿವ ಲಲಿತ್ ನಾರಾಯಣ ಮಿಶ್ರಾ ಮತ್ತು ಇನ್ನಿಬ್ಬರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ರಂಜನ್ ದ್ವಿವೇದಿ (66), ಸಂತೋಷಾನಂದ್ (75), ಸುದೇವಾನಂದ್ (75) ಮತ್ತು ಗೋಪಾಲಜಿ (73) ವಿರುದ್ಧ ಹತ್ಯೆ, ಮಾರಕ ಅಸ್ತ್ರಗಳಿಂದ ಗಂಭೀರ ಸ್ವರೂಪದ ಗಾಯ, ಕ್ರಿಮಿನಲ್ ಸಂಚು ಆಪಾದನೆಗಾಗಿ ಐಪಿಸಿಯ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲಾ ನ್ಯಾಯಾಧೀಶ ವಿನೋದ್ ಗೋಯಲ್ ಕಿಕ್ಕಿರಿದ ನ್ಯಾಯಾಲಯದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಪ್ರಕಟಿಸಿದರು.
ಜೀವಾವಧಿ ಜೈಲು ಶಿಕ್ಷೆಯಲ್ಲದೆ ಸಂತೋಷಾನಂದ್ ಮತ್ತು ಸುದೇವಾಂದ್ಗೆ ತಲಾ ₨25 ಸಾವಿರಗಳ ದಂಡ ಹಾಗೂ ದ್ವಿವೇದಿ ಮತ್ತು ಗೋಪಾಲಜಿಗೆ ತಲಾ ₨20 ಸಾವಿರಗಳ ದಂಡ ವಿಧಿಸಲಾಗಿದೆ.
ಮಿಶ್ರಾ ಮತ್ತು ಇನ್ನಿಬ್ಬರು ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ ತಲಾ ₨5 ಲಕ್ಷಗಳ ಪರಿಹಾರ ನೀಡುವಂತೆ ನ್ಯಾಯಾಧೀಶರು ಬಿಹಾರ ಸರ್ಕಾರಕ್ಕೆ ಆದೇಶಿಸಿದ್ದಾರೆ.
ಬಾಂಬ್ ಸ್ಫೋಟದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಏಳು ಮಂದಿಯ ಕುಟುಂಬಕ್ಕೆ ತಲಾ ₨1.5 ಲಕ್ಷ ಮತ್ತು ಸಾಧಾರಣ ಗಾಯಗೊಂಡಿದ್ದ 20 ಜನರ ಕುಟುಂಬಕ್ಕೆ ತಲಾ ₨50 ಸಾವಿರಗಳ ಪರಿಹಾರವನ್ನು ಕಾನೂನು ಸೇವೆಗಳ ವಿಭಾಗದ ಮೂಲಕ ವಿತರಿಸಬೇಕೆಂದು ಆದೇಶಿಸಲಾಗಿದೆ.
ಮುಗ್ಧರಿಗೆ ಶಿಕ್ಷೆ: ಪುತ್ರ ಅತೃಪ್ತಿ
ಪಟ್ನಾ (ಐಎಎನ್ಎಸ್): ರೈಲ್ವೆ ಸಚಿವರಾಗಿದ್ದ ನಮ್ಮ ತಂದೆಯ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮುಗ್ಧರಿಗೆ ಶಿಕ್ಷೆಯಾಗಿದೆ. ಆದ್ದರಿಂದ ಸಿಬಿಐ, ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಎಲ್. ಎನ್. ಮಿಶ್ರಾ ಅವರ ಪುತ್ರ ವಿಜಯ್ ಮಿಶ್ರಾ ಒತ್ತಾಯಿಸಿದ್ದಾರೆ.
ತೀರ್ಪು ನೀಡಿರುವ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸುವುದಿಲ್ಲ. ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ ಪ್ರಕಾರ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ. ಕೊಲೆಯ ಹಿಂದೆ ದೇಶದ ಪ್ರಭಾವಿ ಮುಖಂಡರು ಇದ್ದಾರೆ. ಆದರೆ ಸಿಬಿಐ ಸರಿಯಾಗಿ ತನಿಖೆ ನಡೆಸದೆ ಆನಂದ್ ಮಾರ್ಗ್ ಸಂಘಟನೆ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಅವರು ಆಪಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.